ರಾಮನಗರ: ಬೆಂಗಳೂರಿನ ಚಾಮರಾಜಪೇಟೆಯ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಇಲ್ಲಿ ರಾಷ್ಟ್ರ ಧ್ವಜದಂತೆಯೇ ಕನ್ನಡದ ಧ್ವಜವನ್ನೂ ಕೂಡ ಹಾರಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ಜೊತೆ ರಾಮನಗರದ ಮಳೆ-ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್, ಬೆಂಗಳೂರಿನ ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಯದ್ದು ಎಂದು ಕೋರ್ಟ್ ಕೂಡ ಸೂಚನೆ ಕೊಟ್ಟಿದ್ದೆ. ಮೈದಾನದಲ್ಲಿನ ಕಾರ್ಯಕ್ರಮಗಳ ಕುರಿತು ಅರ್ಜಿ ಹಾಕಿರುವವರ ಜೊತೆ ಮೀಟಿಂಗ್ ಮಾಡಲಾಗಿದೆ. ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ ಅರಳಿಮರ, ಶೌಚಾಲಯ ಇದೆ. ಮೈದಾನದ ವಿವಾದದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಅಂತೆಯೇ ಚಾಮರಾಜಪೇಟೆಯ ಮೈದಾನ 7 ಕೋಟಿ ಕನ್ನಡಿಗರ ಸ್ವತ್ತು. ಮೈದಾನದ ಬಗ್ಗೆ ಮಾತಾಡಲು ಎಸ್ಡಿಪಿಐನವರು ಯಾರು? ಆಗಸ್ಟ್ 31ರೊಳಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲಾಗುವುದು. ಅಂತೆಯೇ ಮೈದಾನದ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ನಮ್ಮದು ಸಂವಿಧಾನದ ಅಡಿಯಲ್ಲಿ ಬಂದ ಸರ್ಕಾರ. ಈ ಮೈದಾನದಲ್ಲಿ ಯಾಕೆ 75 ವರ್ಷ ರಾಷ್ಟ್ರ ಧ್ವಜ ಹಾರಿಸಲು ಬಿಟ್ಟಿಲ್ಲ. ನಾಚಿಕೆ ಆಗಲ್ವ... ಇದು ಸರ್ಕಾರದ ಸ್ವತ್ತು... ಇಲ್ಲಿ ತ್ರಿವರ್ಣ ಧ್ವಜ ಹಾರಿದ ರೀತಿಯಲ್ಲಿಯೇ ಕನ್ನಡದ ಧ್ವಜ ಕೂಡ ಹಾರಿಸುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದರು.
Advertisement