ತುಮಕೂರು: ಐದು ವರ್ಷದ ಬಾಲಕನ ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಿಗೇನಹಳ್ಳಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಆ್ಯಂಬುಲೆನ್ಸ್ ಚಾಲಕನನ್ನು ಅಮಾನತುಗೊಳಿಸಿದೆ.
ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಅಸ್ವಸ್ಥಗೊಂಡಿದ್ದ ಶೌಖತ್, ಮಲ್ಲಿಕಾ ದಂಪತಿಯ ಪುತ್ರ 5 ವರ್ಷದ ಅಬ್ಬಾಸ್ ನನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿತ್ತು.
ಕರ್ತವ್ಯದ ಅವಧಿಯಲ್ಲಿ ಆರೋಗ್ಯ ಕೇಂದ್ರದಲ್ಲಿ ಇಲ್ಲದಿದ್ದ ಹಿನ್ನೆಲೆಯಲ್ಲಿ ತುಮಕೂರು ಪಿಎಚ್ಸಿಯ ಆಡಳಿತ ವೈದ್ಯಾಧಿಕಾರಿ ಡಾ.ರೋಹಿತ್ ಡಿ ಹಾಗೂ ಕರ್ತವ್ಯದಲ್ಲಿ ಇಲ್ಲದ ವೇಳೆ ಕರೆ ಸ್ವೀಕರಿಸದ ಕಾರಣ ಪಿಎಚ್ಸಿಯ ಆ್ಯಂಬುಲೆನ್ಸ್ ಚಾಲಕ ಶ್ರೀನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ಆರೋಪದಡಿ ರೋಹಿತ್ ಮತ್ತು ಶ್ರೀನಪ್ಪನನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ ರಂದೀಪ್ ಆದೇಶ ಹೊರಡಿಸಿದ್ದಾರೆ.
Advertisement