ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳ ಅಭಿವೃದ್ಧಿಗೆ ರೂ.1 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಗ್ರಾಮ ವಾಸ್ತವ್ಯ ಮಾಡುವ ಗ್ರಾಮಗಳ ಅಭಿವೃದ್ಧಿಗೆ ರೂ.1 ಕೋಟಿ ಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ಶನಿವಾರ ಘೋಷಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಕ್ಕಳ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.
ಶಿಗ್ಗಾಂವಿಯಲ್ಲಿ ಮಕ್ಕಳ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ(ಬಾಡ): ಗ್ರಾಮ ವಾಸ್ತವ್ಯ ಮಾಡುವ ಗ್ರಾಮಗಳ ಅಭಿವೃದ್ಧಿಗೆ ರೂ.1 ಕೋಟಿ ಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ಶನಿವಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದರು.

ಈ ವೇಳೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಲು ಸರ್ಕಾರಕ್ಕೆ ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸಿದರು. ಅಲ್ಲದೆ, ಗ್ರಾಮಸ್ಥರ ಜೀವನದಲ್ಲಿ ಬದಲಾವಣೆಯನ್ನು ತರಲು ಹೆಚ್ಚುವರಿ ಆರ್ಥಿಕ ಸಹಾಯವನ್ನು ಘೋಷಿಸಿದರು.

ಶಿಗ್ಗಾಂವಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಶಿಗ್ಗಾಂವಿ, ಸವಣೂರು ತಾಲ್ಲೂಕಿನ ಜನರ ಮನೆಗಳು ಬಿದ್ದುಹೋಗಿವೆ. ಈಗಾಗಲೇ ಆರು ಸಾವಿರ ಮನೆಗಳನ್ನು ನೀಡಿದ್ದರೂ, ಇನ್ನೂ ಕೆಲವು ಉಳಿದಿವೆ. 15 ದಿನಗಳೊಳಗೆ ಧನಸಹಾಯವನ್ನು ಖುದ್ದಾಗಿ ಬಂದು ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಇಲ್ಲಿನ ಮಕ್ಕಳಿಗೆ ಶಾಲಾ ಬಸ್ಸುಗಳ ಕೊರತೆಯಿದ್ದು, ಶಾಲಾ ಮಕ್ಕಳಿಗೆ ವಿಶೇಷ ಬಸ್ಸುಗಳನ್ನು ಒದಗಿಸಲು ಖಾಸಗಿ ಮತ್ತು ಸರ್ಕಾರಿ ಪ್ರಾಯೋಜಕತ್ವದಲ್ಲಿ ಅದರ ಪ್ರಥಮ ಪ್ರಯೋಗ ಕರ್ನಾಟಕದಲ್ಲಿ ಮಾಡಲಾಗುವುದು ಎಂದು ಹೇಳಿದರು.

ಬಸ್ ಸೌಲಭ್ಯ ಸಂಬಂಧ ಈಗಾಗಲೇ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಹೇಳಿದರು.

ನನ್ನ ಕ್ಷೇತ್ರದ ಜನರಿಗೆ ಎಪ್ರಿಲ್‌ನೊಳಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲು ಚಿಂತನೆ ನಡೆಸಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಿಂಗಳಾಂತ್ಯದೊಳಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಸೌಲಭ್ಯಗಳನ್ನು ಸುಧಾರಿಸಲು ಒತ್ತು ನೀಡಿದ್ದೇವೆ. ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಆರ್ಥಿಕ ನೆರವು ನೀಡಲಾಗಿದ್ದು, ಇದರಿಂದ ಅವರು ತಮ್ಮ ಸಾಂಪ್ರದಾಯಿಕ ವೃತ್ತಿಯಿಂದ ಹೊರಬರಲು ಸಹಾಯವಾಗುತ್ತಿದೆ. ಸುಮಾರು 30 ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳಲ್ಲಿ ಅನುದಾನ ತಲುಪಿವೆ. ಬಡತನ ನಿರ್ಮೂಲನೆ ಇಲಾಖೆಯಿಂದ ಸುಮಾರು ಆರು ಸಾವಿರ ಫಲಾನುಭವಿಗಳಿಗೆ ಸ್ತ್ರೀ ಶಕ್ತಿ ಸಂಘಗಳಿಗೆ ಒಂದು ಲಕ್ಷ ನೀಡುವ ವ್ಯವಸ್ಥೆ ಮಾಡುತ್ತಿದ್ದು, ಆರು ಸಾವಿರ ಮನೆಗಳಿಗೆ ಅನುದಾನ, ರೈತ ವಿದ್ಯಾ ನಿಧಿ, ಕಿಸಾನ್ ಸಮ್ಮಾನ್, ಅಂಗವಿಕಲರ ಮಾಸಾಶನ, ಸಂಧ್ಯಾ ಸುರಕ್ಷಾ ಹಾಗೂ ವಿವಿಧ ಇಲಾಖೆಗಳು ಹಾಗೂ ನಿಗಮಗಳಿಂದ ಒಟ್ಟು 30 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ತಲುಪಿರುವುದು ಒಂದು ದಾಖಲೆ. ಪ್ರತಿ ಕ್ಷೇತ್ರದಲ್ಲಿಯೂ ಈ ಕಾರ್ಯಕ್ರಮವಾಗಬೇಕು ಎಂದರು.

ಸಿಎಂ ಭಾವುಕ
ಇದೇ ವೇಳೆ ತಮ್ಮ ಕ್ಷೇತ್ರದ ಜನರು ತಮಗೆ ನೀಡಿದ ಪ್ರೀತಿ, ವಾತ್ಸಲ್ಯ ಹಾಗೂ ಬೆಂಬಲವನ್ನು ಕಂಡು ಬೊಮ್ಮಾಯಿಯವರ ಭಾವುಕರಾದರು.

ನಾನು ನಿಮಗೆ ಯಾವಾಗಲೂ ಋಣಿಯಾಗಿರುತ್ತೇನೆ. ನಿಮ್ಮ ಆಶೀರ್ವಾದದಿಂದಾಗಿ ನಾನು ಇಡೀ ರಾಜ್ಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com