ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಿಂದ ವಿಮಾನದ ಮೂಲಕ ವಿದೇಶಗಳಿಗೆ ಶೀತಲವಾಗಿರುವ ಮೀನುಗಳ ರಫ್ತು ಐದು ವರ್ಷಗಳ ನಂತರ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಈ ಮೊದಲು ಮೀನನ್ನು ಏರ್ ಇಂಡಿಯಾ ವಿಮಾನಗಳ ಮೂಲಕ ಕಳುಹಿಸಲಾಗುತ್ತಿತ್ತು. ಆದರೆ, ಆರ್ಥಿಕ ಹಿಂಜರಿತ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಮತ್ತು ಅಸಮರ್ಪಕ ಪ್ಯಾಕೇಜಿಂಗ್ ಮತ್ತು ಸೋರಿಕೆಯ ದೂರುಗಳಿಂದಾಗಿ ಇದನ್ನು ನಿಲ್ಲಿಸಲಾಯಿತು.
ಮೀನುಗಳನ್ನು ರಫ್ತು ಮಾಡುವ ಸಂಬಂಧ ಏರ್ ಇಂಡಿಯಾ ಮತ್ತು ಇತರ ಎರಡು ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುತ್ತದೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶೀತಲ ಮೀನುಗಳನ್ನು ಸಾಗಿಸಲು ವಿಮಾನಯಾನ ಸಂಸ್ಥೆಗಳು ನಿರಾಕರಿಸುತ್ತಿವೆ. ಇದರಿಂದಾಗಿ ಮಂಗಳೂರು ಮತ್ತು ಮಲ್ಪೆ ಬಂದರುಗಳಲ್ಲಿ ಹಿಡಿಯುವ ಮೀನುಗಳನ್ನು ಟ್ರಕ್ಗಳಲ್ಲಿ ರಸ್ತೆ ಮಾರ್ಗವಾಗಿ ಬೆಂಗಳೂರು, ಗೋವಾ, ಕೋಯಿಕ್ಕೋಡ್ ಅಥವಾ ತಿರುವನಂತಪುರಂಗೆ ಸಾಗಿಸಿ ಅಲ್ಲಿಂದ ವಿದೇಶಗಳಿಗೆ ಅದರಲ್ಲೂ ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಲಾಗುತ್ತಿದೆ ಎಂದರು.
ಆದರೆ, ಇದು ದುಬಾರಿ ವ್ಯವಹಾರವಾಗಿದೆ ಮತ್ತು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಚಿವರು ಏರ್ಲೈನ್ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದ್ದಾರೆ ಮತ್ತು ಸೇವೆಗಳು ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಆದರೆ, ಷರತ್ತುಗಳೊಂದಿಗೆ ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.
ಈ ಸೇವೆಗಳನ್ನು ಪುನರಾರಂಭಿಸಲು ಮೀನಿನ ಪ್ಯಾಕೇಜಿಂಗ್ ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ವಾರ್ಷಿಕ ಸರಾಸರಿ 70,000 ಮೆಟ್ರಿಕ್ ಟನ್ ಮೀನುಗಳನ್ನು ಸರಕು ಹಡಗುಗಳ ಮೂಲಕ ರಫ್ತು ಮಾಡಲಾಗುತ್ತದೆ.
Advertisement