ದೇವನಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಈಜಲು ಹೋಗಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿಯ ದೇವನಾಯಕನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಇಬ್ಬರು ಬಾಲಕರ ಮೃತದೇಹಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಜುನೇದ್ ಪಾಷ (14) ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು ಇಂದು ಮತ್ತೆ ಮತ್ತೊರ್ವ ವಿದ್ಯಾರ್ಥಿ ಸಂತೋಷ್ (14) ಮೃತದೇಹ ಹೊಂಡದಲ್ಲಿ ಪತ್ತೆಯಾಗಿದೆ. ಮೃತ ಸಂತೋಷ್ ಹೊಸಕೋಟೆಯ ವಳಗೆರೆಪುರ ನಿವಾಸಿ ಎಂದು ತಿಳಿದುಬಂದಿದೆ. ಶಾಲಾ ಹಿಂಭಾಗದ ದಕ್ಷಿಣ ಪಿನಾಕಿನಿ ಕಾಲುವೆಯಲ್ಲಿ ಗುರುವಾರಶವ ಪತ್ತೆಯಾಗಿದೆ.
ಆಗಿದ್ದೇನು?
ನಿನ್ನೆ ಮೊರಾರ್ಜಿ ವಸತಿ ಶಾಲೆಯ ಆರೇಳು ವಿದ್ಯಾರ್ಥಿಗಳು ಹಾಸ್ಟೆಲ್ ಪಕ್ಕದ ಹೊಂಡದಲ್ಲಿ ಈಜಲು ತೆರಳಿದ್ದರು. ವಸತಿ ಶಾಲೆಯ ಮೆಲ್ವಿಚಾರಕನೊಬ್ಬ ವಿದ್ಯಾರ್ಥಿಗಳನ್ನ ಈಜಲು ಕರೆದುಕೊಂಡು ಹೋಗಿದ್ದ. ಈ ರೀತಿ ವಸತಿ ಶಾಲೆಯ ಬೇಜವ್ದಾರಿತನಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿದ್ದು, ಜಿಲ್ಲಾಧಿಕಾರಿಗಳು ತಾಲೂಕು ಆಡಳಿತ ಸ್ಥಳಕ್ಕೆ ಬರಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದಾರೆ.
ಪೋಷಕರ ಆಕ್ರಂದನ:
ಸಂತೋಷ್ ಮೃತದೇಹ ಕಂಡ ಆತನ ತಾಯಿ ರೂಪಲಕ್ಷ್ಮೀ ಘಟನಾ ಸ್ಥಳದಲ್ಲಿ ಕುಸಿದು ಬಿದ್ದರು. ತಂದೆ ಆನಂದ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. 'ನಿನ್ನೆ ರಾತ್ರಿ ಮಗ ಆಂಬುಲೆನ್ಸ್ ಬಳಿ ಇದ್ದಾನೆ. ಕಾಲುವೆ ಬಳಿಯಿಂದ ಮಕ್ಕಳನ್ನು ಕರೆ ತರುತ್ತಿದ್ದಾನೆ ಎಂದು ಹಾಸ್ಟೆಲ್ ಸಿಬ್ಬಂದಿ ತಿಳಿಸಿದ್ದರು. ಜೀವಂತವಾಗಿದ್ದ ಮಗ ಬೆಳಿಗ್ಗೆ ಶವವಾಗಿದ್ದಾನೆ' ಎಂದು ಅವರು ದುಃಖ ತೋಡಿಕೊಂಡರು. ಘಟನೆಯ ನಂತರ ಪರಾರಿಯಾಗಿದ್ದ ವಸತಿ ಶಾಲೆಯ ನಾಲ್ವರು ಸಿಬ್ಬಂದಿಯನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement