ಬೆಂಗಳೂರು: ರಾಜ್ಯದ ಅನೇಕ ಕಡೆಗಳಲ್ಲಿ ವರುಣನ ಆರ್ಭಟ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ಅನಾಹುತವಾಗಿದೆ. ಆದರೆ, ಈ ಬಾರಿಯ ಧಾರಾಕಾರ ಮಳೆ ರಾಜ್ಯದ ಕೆಲವೆಡೆ ದೀರ್ಘಾವಧಿಯ ಬೆಳೆಗೆ ಅನುಕೂಲಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ ಜುಲೈ 1 ರವರೆಗೆ ರಾಜ್ಯದಲ್ಲಿ 184 ಮಿಲಿ ಮೀಟರ್ ಮಳೆಯಾಗಿದೆ. 92 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಧಿಕ ಮಳೆ ದಾಖಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಜುಲೈ ಮೂರನೇ ವಾರದಲ್ಲಿ ಅಧಿಕ ಮಳೆ ದಾಖಲಾಗುತಿತ್ತು. ಆದರೆ, ಈ ವರ್ಷ ಎರಡು ವರ್ಷ ಮುಂಚಿತವಾಗಿ ಅಧಿಕ ಮಳೆಯಾಗುತ್ತಿದೆ. ಇದು ರೈತರು ಧೀರ್ಘಾವಧಿ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಕೃಷಿ ತಜ್ಞ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಪ್ರೊಫೆಸರ್ ಎಂಜಿ ರಾಜೇಗೌಡ ಹೇಳಿದ್ದಾರೆ.
ಸ್ಥಳೀಯ ವಿಶ್ವವಿದ್ಯಾನಿಲಯದ ತಜ್ಞರ ನೆರವಿನೊಂದಿಗೆ ರೈತರು ಮಣ್ಣಿನ ವೈವಿಧ್ಯತೆಗೆ ಅನುಗುಣವಾಗಿ ಹಲಸಂದಿ, ರಾಗಿ, ಜೋಳ, ಮೆಕ್ಕೆಜೋಳ ಮತ್ತು ಕಡಲೆಕಾಯಿ ಬೆಳೆಯಬಹುದು ಮತ್ತು ಜುಲೈ ಅಂತ್ಯದವರೆಗೆ ಬಿತ್ತನೆ ಮಾಡಬಹುದು ಎಂದು ಗೌಡ ವಿವರಿಸಿದರು.
ರೈತರು 90 ಅಥವಾ ಮೂರು ತಿಂಗಳ ಬದಲಿಗೆ ನಾಲ್ಕು ತಿಂಗಳು ಅಥವಾ 135 ದಿನದ ಬೆಳೆಗೆ ಹೋಗಬಹುದು. ದೀರ್ಘಾವಧಿಯ ಈ ಬೆಳೆಗಳಿಗೆ ಹೆಚ್ಚಿನ ಇಳುವರಿ, ಗುಣಮಟ್ಟವೂ ಉತ್ತಮವಾಗಿರುತ್ತದೆ ಮತ್ತು ರೈತರು ಉತ್ತಮ ಬೆಲೆಯನ್ನೂ ನಿರೀಕ್ಷಿಸಬಹುದು ಎಂದು ಅವರು ಹೇಳಿದರು.
ಬೇಸಿಗೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಚಾಮರಾಜನಗರ, ಮೈಸೂರು, ಕಲಬುರ್ಗಿ, ಬೀದರ್ ಮತ್ತಿತರ ಕಡೆ ರೈತರು ಅಲ್ಪಾವಧಿ ಬೆಳೆ ಆಯ್ಕೆ ಮಾಡಿಕೊಂಡಿದ್ದಾರೆ. ಹಲವೆಡೆ ರೈತರು ಅಲ್ಪಾವಧಿ ಬೆಳೆಗಳಾದ ಗೋವಿನ ಜೋಳ, ಹಸಿಬೇಳೆಯಂತ ಬೆಳೆಯನ್ನು ಏಪ್ರಿಲ್ ನಲ್ಲಿ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಕೆಲವೆಡೆ ರೈತರಿಗೆ ಈ ವರ್ಷ ಎರಡನೇ ಬೆಳೆ ತೆಗೆಯುವಂತೆ ಸಲಹೆ ನೀಡಲಾಗಿದ್ದು, ಇದು ದೀರ್ಘಾವಧಿ ಬೆಳೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಜೂನ್ನಲ್ಲಿ, ರಾಜ್ಯವು ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ಮಳೆಯ ಕೊರತೆಯನ್ನು ಕಂಡಿತು. ಇದೇ ರೀತಿ ಮುಂದುವರಿದಿದ್ದರೆ ರೈತರಿಗೆ ತೊಂದರೆಯಾಗಲಿತ್ತು. ಆದರೆ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು ಅದೃಷ್ಟವಶಾತ್ ಕೊರತೆಯನ್ನು ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement