ಮಂಡ್ಯ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಗಾಡಿ ತಡೆದ ಪೊಲೀಸರು: ಸಾರ್ವಜನಿಕರ ತೀವ್ರ ಆಕ್ರೋಶ
ಮಂಡ್ಯ: ದಂಡ ಕಟ್ಟದೇ ವಾಹನ ಮುಂದಕ್ಕೆ ಬಿಡುವುದಿಲ್ಲ ಎಂದು ಸಂಚಾರಿ ಪೊಲೀಸ್ ಪಟ್ಟುಹಿಡಿದ ಕಾರಣ 7 ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿ ಗುರುವಾರ ನಗರದ ಮಹಾವೀರ ವೃತ್ತದಲ್ಲಿ ಪರದಾಡುವ ಸ್ಥಿತಿ ಎದುರಾಗಿತ್ತು.
ಕೆ.ಆರ್.ಪೇಟೆ ತಾಲ್ಲೂಕಿನ ಯಗಚಕುಪ್ಪೆ ಗ್ರಾಮದ ಅಭಿಷೇಕ್ ಹಾಗೂ ಪತ್ನಿ ತಮ್ಮ ಏಳು ತಿಂಗಳ ಹಸುಗೂಸನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಮಹಾವೀರ ವೃತ್ತದಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ ಎಎಸ್ಐ ರಘುಪ್ರಕಾಶ್ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಪತಿಯನ್ನು ತಡೆದರು.
‘ಮಗು ಅನಾರೋಗ್ಯದಿಂದ ಬಳಲುತ್ತಿದ್ದು ಗಾಬರಿಯಲ್ಲಿ ಹೆಲ್ಮೆಟ್ ತಂದಿಲ್ಲ. ದಂಡ ಕಟ್ಟಲು ಕೂಡ ಹಣ ಇಲ್ಲ, ಗಾಡಿ ಬಿಡಿ’ ಎಂದು ದಂಪತಿ ಪರಿಪರಿಯಾಗಿ ಕೇಳಿಕೊಂಡರು. ರೂ.5000 ದಂಡ ಕಟ್ಟದಿದ್ದರೆ ಗಾಡಿ ಬಿಡುವುದಿಲ್ಲ, ಮಗುವನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಪಟ್ಟು ಹಿಡಿದಿದ್ದಾರೆ.
ಇದರಿಂದ ಗೊಂದಲಕ್ಕೀಡಾದ ಅಭಿಷೇಕ್ ಸ್ನೇಹಿತನಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡು ಸಿಗ್ನಲ್ ನಲ್ಲೇ ಮಗು ಹಾಗೂ ಪತ್ನಿಯನ್ನು ಬಿಟ್ಟು, ಎಟಿಎಂನಿಂದ ಹಣ ತರಲು ಹೋಗಿದ್ದಾರೆ. ಎಟಿಎಂ ಕೇಂದ್ರಗಳಲ್ಲಿ ತಾಂತ್ರಿಕ ತೊಂದರೆ ಇದ್ದ ಕಾರಣ ಹಣ ತರಲು ಅರ್ಧ ಗಂಟೆ ಹಿಡಿಯಿತು. ಈ ವೇಳೆ ತಾಯಿ, ಮಗು ತುಂತುರು ಮಳೆಯಲ್ಲೇ ನೆನೆಯುತ್ತಾ ಪರದಾಡುವಂತಾಯಿತು.
ಚಳಿಯಿಂದ ಮಗು ನಡುಗುತ್ತಿರುವುದನ್ನು ನೋಡಿದರೂ ಪೊಲೀಸ್ ಅಧಿಕಾರಿ ದುರ್ವರ್ತನೆ ತೋರಿರುವುದು ಕಂಡು ಬಂದಿತ್ತು.
ಘಟನೆಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೇರಿದಂತೆ ಸಾರ್ವಜನಿಕ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ