ಬೆಂಗಳೂರು: ಜನರಿಗೆ ಅನುಕೂಲವಾಗುವಂತೆ ರಸ್ತೆಗಳ ಸ್ಥಿತಿಯನ್ನು ಸುಧಾರಿಸಲು, ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸುವಂತೆ ಎಂಜಿನಿಯರ್ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶನಿವಾರ ಸೂಚನೆ ನೀಡಿದರು.
ರಸ್ತೆ ಗುಂಡಿಯಿಂದಾಗಿ ನಗರದಲ್ಲಿ ಅವಾಂತರುಗಳು ಸಂಭವಿಸಿದ ಹಿನ್ನೆಲೆಯಲ್ಲಿ ‘ಬಿಬಿಎಂಪಿ ನಗರ ಮೂಲಸೌಕರ್ಯ ಯೋಜನೆಗಳ ನಿರ್ಮಾಣ, ನಿರ್ವಹಣೆ ಮತ್ತು ಯೋಜನಾ ನಿರ್ವಹಣೆ' ಕುರಿತು ಎಂಜಿನಿಯರ್ ಗಳಿಗೆ ಬಿಬಿಎಂಪಿ ಶನಿವಾರ ಟೌನ್ ಹಾಲ್ ನಲ್ಲಿ ಕಾರ್ಯಾಗಾರ ನಡೆಸಿದು. ಕಾರ್ಯಾಗಾರದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್, ಸಂಚಾರ ವಿಭಾಗದ ವಿಶೇಷ ಆಯುಕ್ತರಾದ ಎಂಎ. ಸಲೀಂ ಅವರು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಅವರು, "ನಾವು ದಿನನಿತ್ಯದ ಆಧಾರದ ಮೇಲೆ ಕೆಲಸ ಮಾಡುವ ವಿಧಾನವನ್ನು ಸುಧಾರಿಸಬೇಕು, ಯೋಜನೆಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಸರ್ಕಾರಕ್ಕೆ ಗೌರವವನ್ನು ತರುವಂತೆ ಮಾಡಬೇಕೆಂದು ಎಂಜಿನಿಯರ್ಗಳಿಗೆ ಹೇಳಿದರು.
ಬಿಬಿಎಂಪಿ ಮತ್ತು ಸರಕಾರ ಕೈಗೊಳ್ಳುವ ಯೋಜನೆಗಳಿಗೆ ಎಂಜಿನಿಯರ್ಗಳು ಕೇಂದ್ರಬಿಂದುವಾಗಿದ್ದಾರೆ. ಹೀಗಾಗಿ ನಿರ್ಮಾಣ ಮತ್ತು ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಸಲೀಂ ಅವರು ಮಾತನಾಡಿ, ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸಂಚಾರ ದಟ್ಟಣೆ ಸಮಸ್ಯೆಯಾಗದು. ನಗರದಲ್ಲಿ ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ ಮತ್ತಿತರ ಸಂಸ್ಥೆಗಳ ಎಂಜಿನಿಯರ್ಗಳು ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದರು.
Advertisement