ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ; ಮತ್ತೆ ಗಡುವು ವಿಸ್ತರಣೆ

ಬೆಂಗಳೂರಿನ ರಸ್ತೆಗಳು ಗುಂಡಿಗಳಿಗೆ ಜನತೆ ಕಂಗಾಲಾಗಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ಸಾವು-ನೋವುಗಳು ವರದಿಯಾಗುತ್ತಲೇ ಇವೆ. ಆದರೂ, ಬಿಬಿಎಂಪಿ ಮಾತ್ರ ಇನ್ನೂ ತನ್ನ ಕೆಲಸವನ್ನು ಪೂರ್ಣಗೊಳಿಸುತ್ತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ರಸ್ತೆಗಳು ಗುಂಡಿಗಳಿಗೆ ಜನತೆ ಕಂಗಾಲಾಗಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ಸಾವು-ನೋವುಗಳು ವರದಿಯಾಗುತ್ತಲೇ ಇವೆ. ಆದರೂ, ಬಿಬಿಎಂಪಿ ಮಾತ್ರ ಇನ್ನೂ ತನ್ನ ಕೆಲಸವನ್ನು ಪೂರ್ಣಗೊಳಿಸುತ್ತಿಲ್ಲ.

ನವೆಂಬರ್ 15 ರೊಳಗೆ ನಗರದ ಎಲ್ಲಾ ಗುಂಡಿಗಳನ್ನು ತುಂಬಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನವೆಂಬರ್ ಮೊದಲ ವಾರದಲ್ಲಿ ಭರವಸೆ ನೀಡಿತ್ತು. ಆದರೆ, ಈಗ ಮತ್ತೆ ಗಡುವು ವಿಸ್ತರಿಸಿಕೊಂಡಿದೆ.

ಕಳೆದ ನಾಲ್ಕು ದಿನಗಳಿಂದ ಮಳೆಯ ವಾತಾವರಣವಿದ್ದ ಕಾರಣ ಹಿಂದಿನ ಗಡುವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೆಂಬರ್ 19 ರೊಳಗೆ ಗುಂಡಿಗಳನ್ನು ತುಂಬುವ ಗುರಿಯನ್ನು ತಲುಪಲಾಗುವುದು ಎಂದು ಹೇಳಿದರು.

ಮೇ ತಿಂಗಳಲ್ಲಿ ನಗರದಾದ್ಯಂತ 33,000 ಗುಂಡಿಗಳನ್ನು ಗುರುತಿಸಲಾಗಿತ್ತು. ಇವುಗಳಲ್ಲಿ 32,000 ರಸ್ತೆ ಗುಂಡಿಗಳು ಭರ್ತಿಯಾಗಿದೆ, ಒಂದು ಅಥವಾ ಎರಡು ದಿನ 'ಡ್ರೈ ಡೇ (ಬಿಸಿಲಿನ ವಾತಾವರಣ)ಗಳಿದ್ದರೆ, ಉಳಿದ 1,000 ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಪಾಲಿಕೆಯು ಶೀಘ್ರದಲ್ಲೇ ರಸ್ತೆಗಳನ್ನು ಗುಂಡಿ ಮುಕ್ತ ವಲಯವಾರು ಘೋಷಿಸಲು ಸಿದ್ಧತೆ ನಡೆಸಿದೆ ಎಂದರು.

ಬೈಕ್ ಸ್ಕಿಡ್ ಆಗಿ ರಾಜಾಜಿನಗರದಲ್ಲಿ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿ, ನಾವು ಈಗಾಗಲೇ ಸ್ಥಳವನ್ನು ಪರಿಶೀಲಿಸಿದ್ದೇವೆ ಮತ್ತು ವ್ಯಕ್ತಿ ಗುಂಡಿಯಿಂದ ಕೆಳಗೆ ಬಿದ್ದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಲಿದ್ದಾರೆ. ಪೊಲೀಸರು ತನಿಖಾ ವರದಿ ಸಲ್ಲಿಸಲಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com