ಬೆಂಗಳೂರು: ಕಳ್ಳತನ ಮಾಡಲು ಬಂದಿದ್ದ ಮನೆಯಲ್ಲಿಯೇ ಖದೀಮ ಆತ್ಮಹತ್ಯೆ

ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಅದೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ಬೆಂಗಳೂರಿನ ಇಂದಿರಾನಗರದಿಂದ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಅದೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ಬೆಂಗಳೂರಿನ ಇಂದಿರಾನಗರದಿಂದ ವರದಿಯಾಗಿದೆ.

ಕಳ್ಳತನ ಮಾಡಲು ಬಂದಿದ್ದ ಈ ವ್ಯಕ್ತಿ ದೇವರ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮನೆಯವರು ಪ್ರವಾಸ ಹೋಗಿದ್ದರಿಂದ ಯಾರೂ ಇರಲಿಲ್ಲ.

ಯುರೋಪ್ ಪ್ರವಾಸಕ್ಕೆ ತೆರಳಿದ್ದ ಮನೆಯವರು ಟೂರ್ ಮುಗಿಸಿ ಆಗತಾನೆ ಮನೆಗೆ ವಾಪಸಾಗಿದ್ದರು. ಈ ವೇಳೆ ಮನೆಯ ಒಳಗೆ ವ್ಯಕ್ತಿ ಇರುವ ಬಗ್ಗೆ ಗುಮಾನಿ ಮೂಡಿದ್ದು, ದೇವರ ಮನೆ ಕಿಟಕಿ ತೆರೆದು ನೋಡಿದಾಗ ವ್ಯಕ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯವರು ಕೂಡಲೇ ಇಂದಿರಾನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿ ದಿಲೀಪ್ ಕುಮಾರ್ ಎಂಬುದು ಪತ್ತೆಯಾಗಿದೆ.

ಅಸ್ಸಾಂ ಮೂಲದ ಮೃತ ದಿಲೀಪ್ ಕುಮಾರ್ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ. ಈ ಹಿಂದೆ 2006ರಲ್ಲಿ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಜೆಬಿ ನಗರ ಪೊಲೀಸರು ಬಂಧಿಸಿದ್ದರು. ತಾನು ಸಿಕ್ಕಿಬೀಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು  ಪೊಲೀಸರು ಶಂಕಿಸಿದ್ದಾರೆ.

ಆತ ಕದಿಯಲು ಬಂದಿದ್ದರೆ ಬುಧವಾರ ತಡರಾತ್ರಿಯೇ ತೆರಳುತ್ತಿದ್ದ. ಮನೆಯಲ್ಲೇ ಇದ್ದು, ಪೂಜಾ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ. ಆತನಿಗೆ ಮಾನಸಿಕ ಸಮಸ್ಯೆ ಇದೆ ಎಂದು ಕುಟುಂಬಸ್ಥರು ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದಿರಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com