ಹುಬ್ಬಳ್ಳಿ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ಗಳಿಂದಾಗಿ ವರ್ಣರಂಜಿತ ಕಂಬಳಿಹುಳ (ಕ್ಯಾಟರ್ಪಿಲ್ಲರ್) ಇದೀಗ ವಿಲನ್ ಆಗಿ ಪರಿಣಮಿಸಿದೆ.
ಕಬ್ಬಿನ ಗದ್ದೆಯಲ್ಲಿ ಹೆಚ್ಚಾಗಿ ಕಂಡು ಬರುವ ಈ ಕೀಟದಿಂದಲೇ ಸಾವು ಸಂಭವಿಸಿದೆ ಎಂಬ ಒಕ್ಕಣೆಯೊಂದಿಗೆ ಮರಿ ಹುಳು ಹಾಗೂ ಮನುಷ್ಯನ ಮೃತದೇಹದ ಚಿತ್ರವಿರುವ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ರಾಜ್ಯದಾದ್ಯಂತ ರೈತರಲ್ಲಿ ಭೀತಿ ಮೂಡಿಸಿದ್ದು, ಕಂಬಳಿಹುಳ ತಳಿಯನ್ನು ಕೊಲ್ಲುವ ಕುರಿತು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಅನೇಕ ಕೃಷಿ ತಜ್ಞರು ಮತ್ತು ಕೀಟಶಾಸ್ತ್ರಜ್ಞರು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಗ್ಗೆ ತಮ್ಮದೇ ಆದ ವಿವರಣೆಯನ್ನು ನೀಡಿದ್ದಾರೆ. ತಜ್ಞರ ಪ್ರಕಾರ, ಚಿಟ್ಟೆಹುಳು ಅಥವಾ ಕಂಬಳಿಹುಳಗಳು ನಿರುಪದ್ರವಿ ಮತ್ತು ಸಾವಿಗೆ ಕಾರಣವಾಗುವುದಿಲ್ಲ. ಅವುಗಳನ್ನು ಸ್ಪರ್ಶಿಸಿದರೆ ಚರ್ಮದ ಮೇಲೆ ಕಿರಿಕಿರಿ ಉಂಟಾಗುತ್ತದೆ ಅಷ್ಟೆ' ಎಂದು ಅವರು ಹೇಳಿದ್ದಾರೆ.
ಕಂಬಳಿಹುಳುಗಳಿಂದ ಸಾವು ಸಂಭವಿಸುತ್ತದೆ ಎನ್ನುವ ಹೇಳಿಕೆಯನ್ನು ತಳ್ಳಿಹಾಕಿರುವ ಕೃಷಿ ತಜ್ಞರು, 'ರೈತರಲ್ಲಿ ಗೊಂದಲ ಸೃಷ್ಟಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ರೈತರು ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿದ ಪೋಸ್ಟ್ಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತವೆ. ಈ ವಿಧದ ಕಂಬಳಿಹುಳುಗಳನ್ನು ಎಲ್ಲೆಡೆ ಕಂಡುಹಿಡಿಯುವುದು ಸುಲಭವಲ್ಲ. ಇವುಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಕೆಲವು ಭಾಗಗಳಲ್ಲಿ ಇವುಗಳು ಕಂಡುಬರುತ್ತವೆ. ಹಾಗಾಗಿ ಕಬ್ಬಿನ ಗದ್ದೆಗಳಲ್ಲಿ ಈ ಕೀಟಗಳು ಕಾಣಿಸುವ ಸಾಧ್ಯತೆ ಇಲ್ಲ' ಎಂದು ಹೇಳಿದ್ದಾರೆ.
ಅನೇಕ ಕೀಟಗಳು ಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಹೀಗಾಗಿಯೇ ಈ ರೀತಿಯ ಪೋಸ್ಟ್ಗಳು ಕೌತುಕದ ರೀತಿಯಲ್ಲಿ ವೈರಲ್ ಆಗುತ್ತವೆ. ಕೆಲವು ವರ್ಷಗಳ ಹಿಂದೆ, ಐದು ತಲೆಯ ಹಾವುಗಳ ಫೋಟೋಶಾಪ್ ಮಾಡಿದ ಚಿತ್ರಗಳು ವೈರಲ್ ಆಗಿದ್ದವು. ಎರಡು ತಲೆಯ ಹಾವುಗಳ ಬಗ್ಗೆ ಪುರಾಣಗಳಿವೆ. ಇಂತಹ ಕಥೆಗಳನ್ನು ನಂಬಿ ಈ ಹಿಂದೆಯೂ ಪ್ರಾಣಿಹಿಂಸೆ ಮಾಡಿರುವ ಪ್ರಕರಣಗಳು ನಡೆದಿವೆ. ಪ್ರಾಣಿಗಳು ಅಥವಾ ಕೀಟಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಇಂತಹ ಬೆಳವಣಿಗೆಗಳ ಮೇಲೆ ಸೈಬರ್ ಕ್ರೈಮ್ ಪೊಲೀಸರು ನಿಗಾ ಇಡಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
Advertisement