ಬೆಂಗಳೂರು: ಆರ್ಎಸ್ಎಸ್ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್ಎಸ್ಎಸ್, ಭಾರತದಲ್ಲಿನ ತಾಲಿಬಾನ್ ಇದ್ದಂತೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ತಿರಂಗಾ ಡಿಪಿ ಬದಲಿಸುವ ಪ್ರಧಾನಿ ಕರೆ ಆರ್ಎಸ್ಎಸ್ಗೆ ಅನ್ವಯಿಸುವುದಿಲ್ಲವೇ? ತಿರಂಗಾ ಮೇಲಿನ ಅಸಹನೆ, ದ್ವೇಷ ಸುಪ್ತವಾಗಿ ಮುಂದುವರೆದಿದೆಯೇ? ಆರ್ಎಸ್ಎಸ್ ತಿರಂಗಾವನ್ನು ಒಪ್ಪದಿರುವುದೇಕೆ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ತಿರಂಗಾವನ್ನು 'ಅನಿಷ್ಠದ ಸಂಕೇತ' ಎಂದು ಕರೆದಿದ್ದ ಆರ್ಎಸ್ಎಸ್, ಇನ್ನೂ ಅದೇ ಧೋರಣೆಯನ್ನು, ಮನೋಧರ್ಮವನ್ನು ಮುಂದುವರೆಸಿದೆ. 53 ವರ್ಷಗಳ ಕಾಲ ತಿರಂಗವನ್ನು ತಿರಸ್ಕರಿಸಿದ್ದ ಆರ್ಎಸ್ಎಸ್ ಈಗಲೂ ತಿರಸ್ಕರಿಸುತ್ತಿದೆ. ಹಾಗಾಗಿಯೇ ಪ್ರಧಾನಿ 'ತಿರಂಗಾ ಡಿಪಿ' ಕರೆಯನ್ನು ಆರ್ಎಸ್ಎಸ್ ತಿರಸ್ಕರಿಸಿದೆ ಅಲ್ಲವೇ ಎಂದಿದೆ.
ಅಂದು ಸ್ವತಂತ್ರ ಚಳವಳಿಯ ವಿರುದ್ಧ ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಆರ್ಎಸ್ಎಸ್, ಇಂದು 'ಸ್ವತಂತ್ರ ಅಮೃತ ಮಹೋತ್ಸವ'ವನ್ನೂ ವಿರೋಧಿಸುತ್ತಿರುವಂತಿದೆ. ಆರ್ಎಸ್ಎಸ್ ಎಂದಿಗೂ ಭಾರತದ ಸ್ವತಂತ್ರವನ್ನು ಸಂಭ್ರಮಿಸಲೇ ಇಲ್ಲ, ಭಾರತದ ಸಾರ್ವಭೌಮತೆಯನ್ನು ಒಪ್ಪಿರಲೇ ಇಲ್ಲ. ಏಕೆಂದರೆ ಆರ್ಎಸ್ಎಸ್ಗೆ ಬೇಕಿರುವುದು ಸಂವಿಧಾನಾತ್ಮಕ ಭಾರತವಲ್ಲ, ಮನುಸ್ಮೃತಿಯ ಭಾರತ ಎಂದು ದೂರಿದೆ.
ಬಿಜೆಪಿ ಮಾಡುತ್ತಿರುವುದು 'ತಿರಂಗಾ ಅವಮಾನ ಕಾರ್ಯಕ್ರಮ'. ಬಿಜೆಪಿಗೆ ರಾಷ್ಟ್ರಧ್ವಜವನ್ನು ಅವಮಾನಿಸುವ ನಿರ್ದೇಶನ ನಾಗಪುರದ ಸಂಘದ ಶಾಖೆಯಿಂದ ಬಂದಿರಬಹುದು!. ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಕಚೇರಿಗೆ ವ್ಯಾಪಾರ ಮಾಡಲು ಸಾವಿರಾರು ಕಳಪೆ 'ಗುಜರಾತ್ ಮಾಡೆಲ್ ಧ್ವಜಗಳು' ಬಂದಿವೆ. ತಿರಂಗಾವನ್ನು ಬಿಜೆಪಿ 'ಟವೆಲ್' ನಂತೆ ಬಳಸಿ ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement