ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು, ಗಾಯಗೊಂಡಿದ್ದ 39 ವರ್ಷದ ಬೈಕ್ ಸವಾರನೋರ್ವ ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಆಗಸ್ಟ್ 18 ರಂದು ಈ ಘಟನೆ ನಡೆದಿತ್ತು.
ಸುಪ್ರೀತ್ ರಾಜ್ ಮೃತ ದುರ್ದೈವಿಯಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ತನ್ನ ಕುಟುಂಬದೊಂದಿಗೆ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಆಗಸ್ಟ್ 18 ರಂದು ಸುಪ್ರೀತ್ ರಾಜ್ ಆಫೀಸ್ ಗೆ ಹೋಗುವಾಗ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ರಾಜ್ ಗ್ರನೇಟ್ ಮೂಲಕ ಹೋಗುವಾಗ ರಸ್ತೆ ಮೇಲಿನ ಗುಂಡಿಯಿಂದ ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದಿದ್ದರು. ನಂತರ ಸ್ಥಳೀಯ ಆಸ್ಪತ್ರೆಯೊಂದಕ್ಕೆ ತದನಂತರ ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಮೃತಪಟ್ಟಿದ್ದಾರೆ.
ರಸ್ತೆ ಗುಂಡಿ ಬಗ್ಗೆ ಪದೇ ಪದೇ ದೂರು ಸಲ್ಲಿಸುತ್ತಿದ್ದರೂ ಇನ್ನೂ ಅನೇಕ ಗುಂಡಿಗಳನ್ನು ಮುಚ್ಚಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚದ ಕಾರಣ ತನ್ನ ಸಹೋದರ ಸಾವನ್ನಪ್ಪಿರುವುದಾಗಿ ಆರೋಪಿಸಿ ರಾಜ್ ಸಹೋದರ ಜೋಯಿಲ್ ಸುಮಂತ್ ಬಿಬಿಎಂಪಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ಸುಂಕದಕಟ್ಟೆ ಹಾಗೂ ಹೇರೋಹಳ್ಳಿ ಸಂಪರ್ಕಿಸುವ ರಸ್ತೆ ಗುಂಡಿ ಮುಚ್ಚುವಂತೆ ಬ್ಯಾಡರಹಳ್ಳಿ ಪೊಲೀಸರು ಬಿಬಿಬಿಎಂಪಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅಧಿಕಾರಿಗಳು ಮಾತ್ರ ರಸ್ತೆ ರಿಪೇರಿ ಬಗ್ಗೆ ಏನನ್ನೂ ಹೇಳುತ್ತಿಲ್ಲ.
Advertisement