ಕಮಿಷನ್ ಆರೋಪಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಇಲ್ಲವೇ ಜನತಾ ನ್ಯಾಯಾಲಯ ಎದುರಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

‘ಕಮಿಷನ್’ ಬೇಡಿಕೆ ಕುರಿತು ಗುತ್ತಿಗೆದಾರರ ಸಂಘದಿಂದ ಕೇಳಿಬಂದಿರುವ ಹೊಸ ಆರೋಪವನ್ನು ತನಿಖೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸದಿದ್ದರೆ ಜನತಾ ನ್ಯಾಯಾಲಯ ಮುಂದೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ‘ಕಮಿಷನ್’ ಬೇಡಿಕೆ ಕುರಿತು ಗುತ್ತಿಗೆದಾರರ ಸಂಘದಿಂದ ಕೇಳಿಬಂದಿರುವ ಹೊಸ ಆರೋಪವನ್ನು ತನಿಖೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸದಿದ್ದರೆ ಜನತಾ ನ್ಯಾಯಾಲಯ ಮುಂದೆ ಹೋಗುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. 

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ನಿಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸತ್ಯಾಂಶ ಹೊರತರುವ ನ್ಯಾಯಾಂಗ ತನಿಖೆಯನ್ನು ನಿರಾಕರಿಸುವ ಮೂಲಕ ಸರ್ಕಾರ ಭ್ರಷ್ಟಾಚಾರದ ಹಾವಳಿಯನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 

ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸುಳಿವು ನೀಡಿದ ಅವರು, ಕಳೆದ ಅಧಿವೇಶನ ನಡೆದು ಆರು ತಿಂಗಳಾಗಿರುವುದರಿಂದ ಸೆಪ್ಟೆಂಬರ್‌ನಲ್ಲಿ ಅಧಿವೇಶನ ಕರೆಯದೆ ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದರು. "ಗುತ್ತಿಗೆದಾರರು ಸಾಕ್ಷ್ಯ ಪುರಾವೆಗಳನ್ನು ಒದಗಿಸಲು ಸಿದ್ಧರಾಗಿದ್ದಾರೆ. ಅವರು ತಪ್ಪು ಎಂದು ಸಾಬೀತಾದರೆ ಕಾನೂನು ಶಿಕ್ಷೆಗಳನ್ನು ಎದುರಿಸಲು ಸಹ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಜಲಸಂಪನ್ಮೂಲ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತಾವು ಕೈಗೊಂಡಿರುವ ಕಾಮಗಾರಿಗಳಿಗೆ ಬಾಕಿ ಉಳಿದಿರುವ 22 ಸಾವಿರ ಕೋಟಿ ರೂಪಾಯಿ ಹಾಗೂ ಇತರ ವಿಷಯಗಳನ್ನೂ ನಿಯೋಗ ಸಿದ್ದರಾಮಯ್ಯ ಮುಂದೆ ಪ್ರಸ್ತಾಪಿಸಿತು. ಹಣ ಮಂಜೂರು ಮಾಡದೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ದೂರಿದರು. ಇದಕ್ಕಿಂತ ಭ್ರಷ್ಟ ಸರ್ಕಾರ ಇದುವರೆಗೆ ಬಂದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಆರೋಪ ಮಾಡುವುದರ ಜೊತೆಗೆ ಗುತ್ತಿಗೆದಾರರು ಇತರ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದ್ದಾರೆ ಎಂದ ಅವರು, ಬಿಜೆಪಿ ನಾಯಕರು, ಸಚಿವರು ಮತ್ತು ಶಾಸಕರ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಅಥವಾ ಕೇಂದ್ರ ತನಿಖಾ ದಳದಿಂದ ಏಕೆ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com