ಬೆಂಗಳೂರು: ನಗರದಲ್ಲಿ ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತನನ್ನು ಬೆಂಗಳೂರು ಹೊರವಲಯದ ತುರಹಳ್ಳಿ ನಿವಾಸಿ ಶಂಕರಪ್ಪ (60) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶಿವಮ್ಮ (50) ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಅವರಿಗೆ ತಮ್ಮೆರಡು ಕಾಲುಗಳನ್ನು ಚಲಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಪೂರ್ಣ ಪ್ರಮಾಣದ ಆರೈಕೆಯ ಅಗತ್ಯವಿತ್ತು.
ಆರೋಪಿ ಶಂಕರಪ್ಪ ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದ. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದರು. ಶಂಕರಪ್ಪ ತನ್ನ ಪತ್ನಿಯ ದುಸ್ಥಿತಿಯಿಂದ ಮನನೊಂದಿದ್ದು, ಆಕೆಯನ್ನು ನೋಡಿಕೊಳ್ಳಲು ದ್ವೇಷಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಆರೋಪಿ ತನ್ನ ಪತ್ನಿಯನ್ನು ಎತ್ತಿ ನೀರು ತುಂಬಿದ್ದ 9 ಅಡಿ ಆಳದ ಸಂಪ್ಗೆ ಎಸೆದು ಹತ್ಯೆ ಮಾಡಿದ್ದಾನೆ. ಹೊರಗೆ ಹೋಗಿದ್ದ ದಂಪತಿಯ 11 ವರ್ಷದ ಮಗ ಮನೆಗೆ ಹಿಂತಿರುಗಿದಾಗ ಸಂಪ್ನಲ್ಲಿ ತಾಯಿಯ ಶವ ನೋಡಿದ್ದಾನೆ.
ಕೂಡಲೇ ಆತ ಹತ್ತಿರದ ಗ್ಯಾರೇಜ್ಗೆ ಧಾವಿಸಿ ಅವರ ಸಹಾಯ ಕೋರಿದ್ದಾನೆ. ನಂತರ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಲಘಟ್ಟಪುರ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ತನಿಖೆ ನಡೆಯುತ್ತಿದೆ.
Advertisement