ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡಲು ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದ ಹಳ್ಳಿಗರಿಗೆ 60 ವರ್ಷಗಳ ಬಳಿಕ ವಿದ್ಯುತ್

ಶಿವಮೊಗ್ಗ ತಾಲ್ಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಹೈಕೋರ್ಟ್ ನಿರ್ದೇಶನದಂತೆ ಭೂಗತ ಕೇಬಲ್‌ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಮುಂದಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ: ತಾಲ್ಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಹೈಕೋರ್ಟ್ ನಿರ್ದೇಶನದಂತೆ ಭೂಗತ ಕೇಬಲ್‌ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಮುಂದಾಗಿದೆ.

ಶರಾವತಿ ನದಿಯಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕೆ, ರಾಜ್ಯಕ್ಕೆ ವಿದ್ಯುತ್ ನೀಡಲು ಈ ಗ್ರಾಮಸ್ಥರು ತಮ್ಮ ಜಮೀನು ಮತ್ತು ಮನೆಗಳನ್ನು ಕಳೆದುಕೊಂಡಿದ್ದರು. ವಿಪರ್ಯಾಸವೆಂದರೆ, ತಮ್ಮ ಸ್ವಂತ ಮನೆಗಳಿಗೆ ವಿದ್ಯುತ್ ಪೂರೈಕೆಯಾಗುವ ನಿರೀಕ್ಷೆಯಲ್ಲಿ ಆರು ದಶಕಗಳಿಂದ ಕಾಯುತ್ತಿದ್ದವರ ಕನಸು ಈಗ ನನಸಾಗುವ ಕಾಲ ಬಂದಿದೆ.

ಶೆಟ್ಟಿಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 18 ಕಿಮೀ ದೂರದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿದೆ. 1960ರಲ್ಲಿ ಶರಾವತಿ ವಿದ್ಯುತ್‌ ಯೋಜನೆಗೆ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದ ವೇಳೆ ಸರ್ಕಾರವು ಅಲ್ಲಿನ ಮುಳುಗಡೆ ಸಂತ್ರಸ್ತರನ್ನು ಕರೆತಂದು ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಿತ್ತು. ದಟ್ಟಕಾಡಿನ ನಡುವಿನ ಗ್ರಾಮದಲ್ಲಿ 110ಕ್ಕೂ ಹೆಚ್ಚು ಕುಟುಂಬಗಳಿವೆ.

360.41 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ವಿದ್ಯುತ್ ಯೋಜನೆಯ ಭಾಗವಾಗಿ ಭೂಗತ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಲು ಭಾನುವಾರ ಶಂಕುಸ್ಥಾಪನೆ ನಡೆಯಲಿದೆ. ಈ ಗ್ರಾಮಗಳು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.

ಈ ಗ್ರಾಮಗಳಿಗೆ ವಿದ್ಯುತ್ ಒದಗಿಸಲು ಇದೀಗ ನಾಲ್ಕನೇ ಬಾರಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಈ ಹಿಂದೆ ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನ ನಡೆಸಿದ್ದರು. ಒಂದು ಪ್ರಯತ್ನದಲ್ಲಿ, ವಿದ್ಯುತ್ ಕಂಬಗಳನ್ನು ನಿಲ್ಲಿಸಲಾಯಿತು. ಆದರೆ, ಮೀಸಲು ಅರಣ್ಯ ಪ್ರದೇಶದ ನಿಯಮಗಳ ಕಾರಣದಿಂದಾಗಿ, ಸಸ್ಯ ಮತ್ತು ಪ್ರಾಣಿಗಳಿಗೆ ಅಪಾಯವನ್ನುಂಟುಮಾಡುವ ವಿದ್ಯುತ್ ಕಂಬಗಳನ್ನು ತೆಗೆದುಹಾಕಬೇಕಾಯಿತು.

ಈಗಾಗಲೇ ಗ್ರಾಮದಿಂದ ಸ್ಥಳಾಂತರಿಸಲ್ಪಟ್ಟ ಈ ಜನರನ್ನು ಮತ್ತೆ ಬೇರೆಡೆ ಸ್ಥಳಾಂತರಿಸಲು ಮಾಡಿದ ಪ್ರಯತ್ನಗಳು ಬಲವಾದ ಪ್ರತಿರೋಧವನ್ನು ಎದುರಿಸಿದವು. ಇದೀಗ ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ವಿದ್ಯುತ್ ಯೋಜನೆ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಸ್ಥರಲ್ಲಿ ಕೊಂಚ ಆಶಾಭಾವನೆ ಮೂಡಿಸಿದೆ.

ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು 11.5 ಕಿ.ಮೀ ದೂರದ ಭೂಗತ ಕೇಬಲ್ ಅಳವಡಿಕೆಗೆ ಡಿ. 11ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಭಾಗವಹಿಸುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com