ಐದು ಬಾರಿ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೋವಿಡ್ ಕರಿನೆರಳು; ಸಾಹಿತ್ಯ ಪ್ರಿಯರಲ್ಲಿ ತಳಮಳ

ಈ ವರ್ಷ ಐದು ಬಾರಿ ಮುಂದೂಡಲ್ಪಟ್ಟಿರುವ ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಈಗ ಕೋವಿಡ್-19 ರ ಕರಿ ನೆರಳು ಬೀಳುವ ಸಾಧ್ಯತೆ ಇದೆ. ಈಗಾಗಲೇ ಘೋಷಿಸಿರುವ ವೇಳಾಪಟ್ಟಿಯಂತೆ 2023ರ ಜನವರಿ 6ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ

ಬೆಂಗಳೂರು: ಈ ವರ್ಷ ಐದು ಬಾರಿ ಮುಂದೂಡಲ್ಪಟ್ಟಿರುವ ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಈಗ ಕೋವಿಡ್-19 ರ ಕರಿ ನೆರಳು ಬೀಳುವ ಸಾಧ್ಯತೆ ಇದೆ. ಈಗಾಗಲೇ ಘೋಷಿಸಿರುವ ವೇಳಾಪಟ್ಟಿಯಂತೆ 2023ರ ಜನವರಿ 6ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿಯೇ ಸಮ್ಮೇಳನ ನಡೆದಿಲ್ಲ. ಇದೀಗ ಮತ್ತೆ ಕೋವಿಡ್‌ನಿಂದಾಗಿ ಭೀತಿ ಎದುರಾಗಿದೆ. ಈ ಬಾರಿ ಕನಿಷ್ಠ ಮೂರು ಲಕ್ಷ ಜನರನ್ನು ಆಕರ್ಷಿಸುವ ನಿರೀಕ್ಷೆಯಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಸಂಘಟನಾ ಸಮಿತಿಗಳು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಮತ್ತೊಂದು ಕೋವಿಡ್ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚಿಸಿದೆ.

ಕೊನೆಯ ಬಾರಿಗೆ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಂಕ್ರಾಮಿಕ ರೋಗವು ಉಲ್ಭಣಗೊಳ್ಳುವ ಹಂತದಲ್ಲಿ ಕಲಬುರಗಿಯಲ್ಲಿ 2020ರಲ್ಲಿ ನಡೆದಿತ್ತು. 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಜನವರಿಯಲ್ಲಿ ಆಯೋಜಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋವಿಡ್ ಎರಡನೇ ಮತ್ತು ಮೂರನೇ ಅಲೆಗಳ ಕಾರಣ ಮುಂದೂಡಲಾಗಿತ್ತು. ನಂತರ ರಾಜ್ಯ ಸರ್ಕಾರ 2022ರ ಜನವರಿಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಘೋಷಿಸಿತ್ತು.

ಆದರೆ ಅಂದಿನಿಂದ, ಕೋವಿಡ್ ನಿರ್ಬಂಧಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಇದನ್ನು ಐದು ಬಾರಿ ಮುಂದೂಡಲಾಗಿದೆ. 2022ರ ಜನವರಿಯಿಂದ, ಮಾರ್ಚ್‌ಗೆ ಮತ್ತು ನಂತರ ಮೇಗೆ ಮುಂದೂಡಲಾಯಿತು. ನಂತರ ಸೆ. 23ರಿಂದ 25ರವರೆಗೆ ನಡೆಯಲಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ, 2022ರ ನವೆಂಬರ್‌ವರೆಗೆ ಮುಂದೂಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅವರು ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ನವೆಂಬರ್ 2 ರಿಂದ 4 ರವರೆಗೆ ಜಾಗತಿಕ ಹೂಡಿಕೆದಾರರ ಸಭೆಯೊಂದಿಗೆ ಸರ್ಕಾರವು ಒಪ್ಪಂದ ಮಾಡಿಕೊಂಡಿದ್ದರಿಂದ ಆಗಲೂ ಸೂಕ್ತವಲ್ಲ ಎಂದಾಯಿತು. ಈಗ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಡಿಸೆಂಬರ್ ಕೂಡ ಸ್ವೀಕಾರಾರ್ಹವಲ್ಲ ಎಂದು ಮುಂದಿನ ಜನವರಿಗೆ ತೀರ್ಮಾನಿಸಲಾಯಿತು.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಶುಕ್ರವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿವೆ. 'ಸಭೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಆದರೆ, ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾತ್ರ ಕೇಳಲಾಗಿದೆ' ಎಂದು ಟಿಎನ್‌ಐಇಗೆ ತಿಳಿಸಿದರು.
ನಮಗೆ ಇನ್ನೂ ಸಮಯವಿದೆ. ಅಂತಹ ಪರಿಸ್ಥಿತಿ ಬಂದರೆ ಸಿಎಂ ಜತೆ ಸಮಾಲೋಚನೆ ನಡೆಸಿ ಜನಪರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮ ನಡೆಸಲು ಉತ್ಸುಕರಾಗಿದ್ದೇವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ನಡೆಯುತ್ತಿರುವಾಗ, ರಾಜ್ಯದ ಏಕತೆಯನ್ನು ಪ್ರದರ್ಶಿಸಲು ಮತ್ತು ಕನ್ನಡವನ್ನು ಹೆಮ್ಮೆಯಿಂದ ಎತ್ತಿ ಹಿಡಿಯಲು ಇದು ಸರಿಯಾದ ಸಮಯ. ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ನಾವು ಈ ಕಾರ್ಯಕ್ರಮವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಬಹುದು ಎಂದು ನಾವು ಭಾವಿಸುತ್ತೇವೆ'  ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com