ಬೆಂಗಳೂರು: ದೇಶಾದ್ಯಂತ ಮತ್ತೊಂದು ಕೋವಿಡ್ ಅಲೆಯ ಭೀತಿ ಸೃಷ್ಟಿಸಿರುವ ಒಮಿಕ್ರಾನ್ ಬಿಎಫ್.7 ರೂಪಾಂತರಿ ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
ಪ್ರಸ್ತುತ ದೇಶದಲ್ಲಿ ಕೋವಿಡ್ನ ಹೊಸ ತಳಿ ಬಿಎಫ್ 7 ಕಾಣಿಸಿಕೊಂಡಿದ್ದು, ಈ ಹೊಸ ತಳಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ನಡುವೆ ಈಗ ಬಿಎಫ್ 7 ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರವು ಸೋಮವಾರ ಘೋಷಿಸಿದೆ.
ಈ ಕುರಿತು ನಡೆದ ತಜ್ಞರ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಅವರು, 'ನಾವು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ಶಂಕಿತ ಪ್ರಕರಣ ಹೊಂದಿರುವವರನ್ನು ಐಸೋಲೇಟ್ ಮಾಡುತ್ತೇವೆ. ಚಿಕಿತ್ಸೆ ಕೂಡಾ ಇಲ್ಲಿ ನೀಡಲಾಗುತ್ತದೆ. ಹಾಗೆಯೇ ಕೋವಿಡ್ನ ಹೊಸ ತಳಿ BF.7 ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂತೆಯೇ ಎಲ್ಲ ಜಿಲ್ಲೆಗಳಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಸಮಿತಿಯು ಎಲ್ಲ ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರ ಮೊದಲಾದವುಗಳಿಗೆ ಭೇಟಿ ನೀಡಲಿದೆ. ಆಸ್ಪತ್ರೆಯಲ್ಲಿ ಹೇಗೆ ಸಿದ್ಧತೆ ನಡೆಸಲಾಗಿದೆ, ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಹೇಗಿದೆ, ಐಸಿಯು ವೆಂಟಿಲೇಟರ್ ಎಷ್ಟಿದೆ, ಸ್ಥಿತಿ ಹೇಗಿದೆ ಎಂದು ಪರಿಶೀಲಿಸಲಿದೆ ಎಂದು ಕೂಡಾ ಹೇಳಿದ್ದಾರೆ.
Advertisement