ಕಬಾಬ್ ರುಚಿಯಾಗಿಲ್ಲ ಎಂದು ಪತ್ನಿಗೆ ಚಾಕು ಇರಿದು ನೇಣು ಬಿಗಿದುಕೊಂಡ 'ಪತಿ ಮಹಾಶಯ'

ಪತ್ನಿ ಮಾಡಿದ ಕಬಾಬ್ ರುಚಿಯಾಗಿಲ್ಲ ಎಂದು ಆರೋಪಿಸಿ 'ಪತಿ ಮಹಾಶಯ'ನೊಬ್ಬ ಆಕೆಗೆ ಚಾಕು ಇರಿದು ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪತ್ನಿ ಮಾಡಿದ ಕಬಾಬ್ ರುಚಿಯಾಗಿಲ್ಲ ಎಂದು ಆರೋಪಿಸಿ 'ಪತಿ ಮಹಾಶಯ'ನೊಬ್ಬ ಆಕೆಗೆ ಚಾಕು ಇರಿದು ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರೆಕೆರೆ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಗಾರ್ಮೆಂಟ್ಸ್ ಉದ್ಯೋಗಿ ತನ್ನ ಪತ್ನಿ ತಯಾರಿಸಿದ ಕಬಾಬ್‌ ರುಚಿಯಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೇರಿ ಹರಿತವಾದ ವಸ್ತುವಿನಿಂದ ಪತ್ನಿಗೆ ಇರಿದಿದ್ದಾನೆ. 

ಏನಿದು ಘಟನೆ?
ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಉದ್ಯೋಗಿ ಸುರೇಶ್ (48 ವರ್ಷ) ಎಂಬಾತ ಕೆಲಸ ಮುಗಿಸಿ ಮನೆಗೆ ಬಂದಾಗ ಡ್ರಿಂಕ್ಸ್ ಸೇವಿಸಲು ಬಯಸಿದ್ದ. ಈ ವೇಳೆ ಪತ್ನಿ ಶಾಲಿನಿ (42 ವರ್ಷ)ಗೆ ಕಬಾಬ್ ತಯಾರಿಸಿಕೊಡುವಂತೆ ಹೇಳಿದ್ದಾನೆ. ಅದರಂತೆ ಪತ್ನಿ ಶಾಲಿನಿ ಕಬಾಬ್ ಮಾಡಿಕೊಟ್ಟಿದ್ದು,  ಕಬಾಬ್ ತಿಂದ ಸುರೇಶ್ ಪತ್ನಿಗೆ ಕಬಾಬ್ ರುಚಿಯಾಗಿಲ್ಲ ಎಂದು ಮನಸೋ ಇಚ್ಛೆ ಬೈದಾಡಿದ್ದಾನೆ. ಈ ವೇಳೆ ಆಕ್ರೋಶದಿಂದ ಹರಿತವಾದ ಆಯುಧದಿಂದ ಆಕೆಯ ಕೈಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ. ಪತ್ನಿ ಕೂಗುತ್ತಲೇ ಆತ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಈ ವೇಳೆ ಆಕೆ ಕಿರುಚಲು ಆರಂಭಿಸಿದ್ದು, ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರಿಂದ ಥಳಿತಕ್ಕೊಳಗಾಗುವ ಭಯದಿಂದ ಸುರೇಶ್ ಮನೆಯಿಂದ ಓಡಿ ಹೋಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮೆಡಿಕೋ ಲೀಗಲ್ ಕೇಸ್ ನೀಡಿದ್ದು, ಪರಾರಿಯಾಗಿರುವ ಪತಿಗೆ ಶೋಧ ನಡೆಸಿದಾಗ ಆತ ಸಮೀಪದ ಖಾಲಿ ನಿವೇಶನದಲ್ಲಿ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪತ್ನಿ ಶಾಲಿನಿ ಹೇಳಿಕೆ ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com