ಕೋವಿಡ್ ಲಸಿಕೆ: ರಾಜ್ಯದಲ್ಲಿ 11 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು!
ಬೆಂಗಳೂರು: ಕೋವಿಡ್-19 ಲಸಿಕೆ ಅಭಿಯಾನದಲ್ಲಿ ರಾಜ್ಯವು ಶನಿವಾರ 11 ಕೋಟಿ ಗಡಿ ದಾಟಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕವು ಇದುವರೆಗೆ 5.45 ಕೋಟಿ ಮೊದಲ ಡೋಸ್ ಲಸಿಕೆ, 5.28 ಕೋಟಿ ಎರಡನೇ ಡೋಸ್ ಮತ್ತು 26.41 ಲಕ್ಷ ಮುನ್ನೆಚ್ಚರಿಕೆ ಡೋಸ್ ಅನ್ನು ನೀಡಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾವು ಮತ್ತೊಂದು ಮೈಲಿಗಲ್ಲು ತಲುಪಿದ್ದೇವೆಂದು ಹೇಳಲು ಸಂತೋಷವಾಗುತ್ತಿದೆ. ರಾಜ್ಯವು 11 ಕೋಟಿ ಡೋಸ್ ಕೋವಿಡ್ ಲಸಿಕೆ ದಾಟಿದೆ. ಈ ಸಾಧನೆ ಸೇವೆ ಸಲ್ಲಿಸಿದ ಆರೋಗ್ಯ ಕಾರ್ಯಕರ್ತರು. ಆರೋಗ್ಯ ಸಚಿವ ಸುಧಾಕರ್, ನಾಗರೀಕರು, ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಮುಖಂಡರು ಮತ್ತು ಸ್ವಯಂಸೇವಕರಿಗೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ, ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಜೂ.22ಕ್ಕೆ ರಾಜ್ಯದಲ್ಲಿ ಕೋವಿಡ್ 4ನೇ ಅಲೆ
ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಐಐಟಿ ಕಾನ್ಪುರದ ಮುನ್ಸೂಚನೆಯಂತೆ ಜೂನ್ 22 ರೊಳಗೆ ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆಯು ಆರಂಭವಾಗಲಿದೆ ಎಂದು ಹೇಳಿದೆ.
ಇದನ್ನು ಭಾರತೀಯ SARS-CoV-2 ಜೀನೋಮಿಕ್ ಕನ್ಸೋರ್ಟಿಯಾ (INSACOG) ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ಇದೀಗ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ B4 ಮತ್ತು B5 ರೂಪಾಂತರಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರೂಪಾಂತರಿ ವೈರಸ್ ಗಳಿಂದ ರಾಜ್ಯದಲ್ಲಿ ನಾಲ್ಕನೇ ಅಲೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ನಾಲ್ಕನೇ ಅಲೆ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದನ್ನು ತಡೆಯರು ಜನರು ಮುಂಜಾಗ್ರತಾ ಕ್ರಮಗಳ ಕೈಗೊಳ್ಳಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
ಮಾಸ್ಕ್ ಧರಿಸದಿದ್ದರೆ ಸದ್ಯಕ್ಕಿಲ್ಲ ದಂಡ
ನಗರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ನಿಯಮವನ್ನು ಇನ್ನೊಂದು ವಾರದಲ್ಲಿ ಜಾರಿಗೆ ತರುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸದ್ಯಕ್ಕೆ ನಿಯಮ ಜಾರಿಗೆ ತರದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮಾರ್ಚ್ 31 ರಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಆರೋಗ್ಯ ಇಲಾಖೆ ಸದ್ಯಕ್ಕೆ ದಂಡ ನಿಧಿಸುವ ನಿಯಮ ಜಾರಿಗೆ ತರದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.