ಪಠ್ಯಪುಸ್ತಕ ಪರಿಷ್ಕರಣೆ: ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಜೀನಾಮೆಗೆ ಬಹುತ್ವ ಕರ್ನಾಟಕ ಆಗ್ರಹ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಸ್ಥಾನವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಹುತ್ವ ಕರ್ನಾಟಕ’ ವೇದಿಕೆ ಸೋಮವಾರ ಆಗ್ರಹಿಸಿದೆ.
ಸಚಿವ ಬಿಸಿ ನಾಗೇಶ್
ಸಚಿವ ಬಿಸಿ ನಾಗೇಶ್

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಸ್ಥಾನವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಹುತ್ವ ಕರ್ನಾಟಕ’ ವೇದಿಕೆ ಸೋಮವಾರ ಆಗ್ರಹಿಸಿದೆ.

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಹುತ್ವ ಕರ್ನಾಟಕ ವೇದಿಕೆಯ ಸದಸ್ಯರು, ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯಿಂದಲೂ ಸತತವಾಗಿ ಮಕ್ಕಳ ಶಿಕ್ಷಣವನ್ನು ಪಣಕ್ಕೆ ಒಡ್ಡಿದ ಸಚಿವರು ರಾಜ್ಯದ ಶಿಕ್ಷಣವನ್ನು ಬಿಕ್ಕಟಿನಲ್ಲಿ ಸಿಲುಕಿಸಿದ್ದಾರೆ. ಹಾಗೆಯೇ ಅಪೌಷ್ಠಿಕಾಂಶ ಮಟ್ಟ ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸಲು ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ ಮತ್ತು ಶಿಕ್ಷಣವನ್ನು ಬ್ರಾಹ್ಮಣವಾದಿ ಹಿಡಿತಕ್ಕೆ ಸಿಲುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂಕ್ರಾಮಿಕ ರೋಗವು ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆ ಬಿಡಲು ಕಾರಣವಾಯಿತು ಮತ್ತು ಕಲಿಕೆಯ ಅಂತರವನ್ನು ಹೆಚ್ಚಿಸಿತು. 46,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಕೇವಲ 35 ಪ್ರತಿಶತದಷ್ಟು ಮಕ್ಕಳು ಮಾತ್ರ ಶಾಲೆಗೆ ಮರಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮೀಕ್ಷೆಯು ಕರ್ನಾಟಕದಲ್ಲಿ ಶೇಕಡಾ 35.4 ರಷ್ಟು ಮಕ್ಕಳು ಕುಂಠಿತವಾಗಿದ್ದಾರೆ ಮತ್ತು ಶೇಕಡಾ 32.9 ರಷ್ಟು ಕಡಿಮೆ ತೂಕವನ್ನು ಹೊಂದಿದ್ದಾರೆ ಎಂದು ಹೇಳಿದೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ಪ್ರತಿ ದಿನ ಮೊಟ್ಟೆ ನೀಡಬೇಕ೦ದು ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ ಮತ್ತು ಹಲವಾರು ಪೌಷಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸಹ ಸಚಿವ ನಾಗೇಶ್‌ ಅವರ ಸಚಿವಾಲಯವು ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ 5 ಬಾರಿ ಮೊಟ್ಟೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಕಾರಣ ಧಾರ್ಮಿಕ ಗುಂಪುಗಳ ಜಾತೀಯ ಮನೋಭಾವನೆ ಒಂದೇ ಆಗಿದೆ.

4ನೇ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ, ಶಾಲಾ ಮಕ್ಕಳಿಗೆ ಮೊಟ್ಟೆ ನೀಡಿದರೆ ಶೇಖಡಾ 83 ಜನರಿಗೆ ಯಾವುದೇ ರೀತಿಯ ಸಾಂಸ್ಕೃತಿಕ ಅಥವಾ ಧಾರ್ಮಿಕ ತಕರಾರು ಇರುವುದಿಲ್ಲ ಎಂದು ವರದಿ ಮಾಡಲಾಗಿದೆ. ಹೀಗಿದ್ದರೂ ಸಹ ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಸಿ ಊಟದೊಂದಿಗೆ ಮೊಟ್ಟೆ ನೀಡದಿರುವ ರಾಜ್ಯವಾಗಿದೆ.

ವೃತ್ತಿಪರವಲ್ಲದ, ಅವೈಜ್ಞಾನಿಕ ಮತ್ತು ಜಾತಿವಾದಿ ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆಯು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 29 ಅನ್ನು ಉಲ್ಲಂಘಿಸುತ್ತದೆಯ ದಲಿತ ಲೇಖಕರಾದ ಪಿ ಲಂಕೇಶ್ ಮತ್ತು ಸಾರಾ ಅಬೂಬಕರ್ ಅವರ ಕೃತಿಗಳನ್ನು ತೆಗೆದುಹಾಕುವುದು ಮತ್ತು ಡಾ ಅಂಬೇಡ್ಕರ್ ಮತ್ತು ಬಸವಣ್ಣ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ತಿರುಚಿರುವುದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com