ಟ್ರೂ ಕಾಲರ್ ನಿಂದ ಬಚಾವ್; ಪೋನ್ ಪೇ ನಲ್ಲಿ ಲಾಕ್: ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕಜಾಲ ಪೊಲೀಸರ ಲಂಚದ ಕಥೆ!

ಚಿಕ್ಕಜಾಲ ಪೊಲೀಸರ ರೋಚಕ ಲಂಚದ ಮೂರನೇ ಕಥೆ ಹೊರಗೆ ಬಿದ್ದಿದೆ. ಲಂಚದ ಆಸೆಗೆ ಬಿದ್ದು ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್ ಗಳು ಓಡಿ ಹೋಗಿದ್ದರು. ಇದೀಗ ಮೂರನೇ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್ ಪರಾರಿಯಾಗಿದ್ದಾರೆ.
ಪ್ರವೀಣ್ ಮಹೇಶ್ವರಪ್ಪ
ಪ್ರವೀಣ್ ಮಹೇಶ್ವರಪ್ಪ
Updated on

ಬೆಂಗಳೂರು: ಚಿಕ್ಕಜಾಲ ಪೊಲೀಸರ ರೋಚಕ ಲಂಚದ ಮೂರನೇ ಕಥೆ ಹೊರಗೆ ಬಿದ್ದಿದೆ. ಲಂಚದ ಆಸೆಗೆ ಬಿದ್ದು ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್ ಗಳು ಓಡಿ ಹೋಗಿದ್ದರು. ಇದೀಗ ಮೂರನೇ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್ ಪರಾರಿಯಾಗಿದ್ದಾರೆ.

ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಲಂಚ ಸ್ವೀಕರಿಸಿದ ಪೊಲೀಸ್ ಕಾನ್‌ಸ್ಟೇಬಲ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಚಿಕ್ಕಜಾಲ ಠಾಣೆಯಿಂದ ಎಸ್ಕೇಪ್ ಆಗಿರುವ ಇನ್‌ಸ್ಪೆಕ್ಟರ್ ಹೆಸರು ಪ್ರವೀಣ್ ಮಹೇಶ್ವರಪ್ಪ.

ಗುತ್ತಿಗೆದಾರ ಪ್ರಕಾಶ್ ಎಂಬುವರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಹಾಗೂ ಪ್ರಕಾಶ್ ಅವರ ತಂದೆ ತಾಯಿ ಹಾಗೂ ಸಂಬಂಧಿಕರ ಹೆಸರು ಸೇರಿಸದೇ ಇರಲು ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ಲಕ್ಷ ರೂ. 65 ಸಾವಿರ ರೂ.ಗಳನ್ನು ಹೆಡ್ ಕಾನ್‌ಸ್ಟೇಬಲ್ ರವಿ ಮೂಲಕ ಸ್ವೀಕರಿಸಿದ್ದರು.

ಆ ಬಳಿಕ ಮತ್ತೆ ಐದು ಲಕ್ಷ ರೂ. ಲಂಚ ನಿಡುವಂತೆ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹಣವನ್ನು ನೀಡದಿದ್ದಕ್ಕೆ ಗುತ್ತಿಗೆದಾರ ಪ್ರಕಾಶ್ ಅವರ ಪೋಷಕರಿಗೆ ಹಾಗೂ ಬಾಮೈದನಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಲಂಚ ನೀಡಲು ಇಷ್ಟವಿಲ್ಲದ ಕಾರಣ ಗುತ್ತಿಗೆದಾರನ ಸಂಬಂಧಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಲಂಚ ತರುವಂತೆ ಕರೆ ಮಾಡಿ ಹೇಳಿದ್ದ ಪೇದೆ ರವಿ ಕುಮಾರ್, ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಇದ್ದಾರೆ ಎಂದು ಚಿಕ್ಕಜಾಲ ಪೊಲೀಸ್ ಠಾಣೆ ಬಳಿ ಕರೆಸಿಕೊಂಡಿದ್ದಾನೆ. ಲಂಚದ ಹಣ ಸ್ವೀಕರಿಸಿ ಇನ್ನೇನು ಲೋಕಾ ಬಲೆಗೆ ಬೀಳುವ ಮುನ್ನ ಕಾನ್‌ಸ್ಟೇಬಲ್ ರವಿ ಎಚ್ಚೆತ್ತುಕೊಂಡಿದ್ದಾನೆ. ಲಂಚ ಕೊಡಲು ಹೋಗಿದ್ದ ವ್ಯಕ್ತಿಗೆ ಬಂದ ಕರೆಯ ನಂಬರ್ ನ್ನು ಟ್ರೂ ಕಾಲರ್ ಆಪ್ ನಲ್ಲಿ ನೋಡಿ ( ಎಸಿಬಿ ಪೊಲೀಸ್ ) ಎಂದು ಹೆದರಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಅಚ್ಚರಿ ಏನೆಂದರೆ ಈ ಲಂಚ ಸ್ವೀಕರಿಸುವ ಮುನ್ನವೇ ಪೋನ್ ಪೇ ಮೂಲಕ ಹತ್ತು ಸಾವಿರ ಲಂಚದ ಹಣವನ್ನು ಮೂರನೇ ವ್ಯಕ್ತಿಯ ಮೊಬೈಲ್ ಗೆ ಹಾಕಿಸಿಕೊಂಡು ಲಂಚ ಪಡೆದುಕೊಂಡಿದ್ದ. ಸಾಕ್ಷಾಧಾರಗಳನ್ನು ಪರಿಶೀಲಸಿದ ಲೋಕಾಯುಕ್ತ ಪೊಲೀಸರು ಕಾನ್‌ಸ್ಟೇಬಲ್ ರವಿ ಯನ್ನು ಬಂಧಿಸಿದ್ದಾರೆ.

ಕಾನ್‌ಸ್ಟೇಬಲ್ ಬಂಧನ ಆಗುತ್ತಿದ್ದಂತೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಅವರ ಎರಡು ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರವೀಣ್ ಅವರು ನಿರೀಕ್ಷಣಾ ಜಾಮೀನು ಪಡೆಯುವ ಸಲುವಾಗಿ ಠಾಣೆಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com