ಬೆಂಗಳೂರು: ಯಲಹಂಕದ ಕೊಂಡಪ್ಪ ಲೇಔಟ್ನಲ್ಲಿ ನೇಕಾರನೊಬ್ಬ ತನ್ನ ಮನೆಯ ಟೆರೇಸ್ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆತನ ಖಾಸಗಿ ಅಂಗ, ತಲೆ ಮತ್ತು ಇತರ ಭಾಗಗಳಿಗೆ ಗಾಯಗಳು ಪತ್ತೆಯಾಗಿರುವುದು ಕಂಡು ಬಂದಿದೆ.
ಮೃತ ವ್ಯಕ್ತಿಯನ್ನು ಚಂದ್ರಶೇಖರ್ (33) ಎಂದು ಗುರ್ತಿಸಲಾಗಿದೆ. ಚಂದ್ರಶೇಖರ್ ಅಂಧ್ರಪ್ರದೇಶದ ಹಿಂದೂಪುರ ಮೂಲದವರಾಗಿದ್ದು, ಕಳೆದ ಎಂಟು ವರ್ಷಗಳಿಂದ ವಾಸವಿದ್ದರು ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಚಂದ್ರಶೇಖರ್ ಮತ್ತು ಆತನ ಪತ್ನಿ ಶ್ವೇತಾ ಕೊಂಡಪ್ಪ ಲೇಔಟ್ನಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ 8.45ರ ಸುಮಾರಿಗೆ ಚಂದ್ರಶೇಖರ್ ಅವರ ಮನೆಯ ಮಹಡಿ ಮೇಲೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ಬದುಕುಳಿದಿಲ್ಲ.
ಚಂದ್ರಶೇಖರ್ ಅವರ ಸಹೋದರ ಭಾಸ್ಕರ್ ಅವರು ಮಾತನಾಡಿ, ಈ ಹಿಂದೆ ಲೊಕೇಶ್ ಎಂಬಾತ ಶ್ವೇತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಮದುವೆಯಾದರೂ ಕೂಡ ತನ್ನನ್ನು ಪ್ರೀತಿಸುವಂತೆ ಶ್ವೇತಾ ಹಿಂದೆ ಬಿದ್ದಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಈ ಹಿನ್ನೆಲೆ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು.
ದೂರು ದಾಖಲಾದ ವೇಳೆ ಪೊಲೀಸ್ ಠಾಣೆ ಬಳಿಯೇ ಶ್ವೇತಾ ಚಪ್ಪಲಿಯಲ್ಲಿ ಲೋಕೇಶ್ನಿಗೆ ಬಾರಿಸಿದ್ದಳು. ಹೀಗಾಗಿ ಲೋಕೇಶ್ ಕಾಟ ತಾಳಲಾರದೇ ಶ್ವೇತಾ ಹಾಗೂ ಚಂದ್ರಶೇಖರ್ನನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಹಿಂದೂಪುರದಿಂದ ಬೆಂಗಳೂರಿಗೆ ಬಂದು ಲೋಕೇಶ್ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ಹಂತಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದೀಗ ಶ್ವೇತಾ ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement