ವಿರೋಧದ ನಡುವೆಯೂ ಚಾಮರಾಜಪೇಟೆಯಲ್ಲಿ ಗಣೇಶ ಕೂರಿಸಿದ ಶಾಸಕ ಜಮೀರ್ ಅಹ್ಮದ್ ಖಾನ್!

ರಾಷ್ಟ್ರಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಕೊನಗೂ ಚಾಮರಾಜಪೇಟೆಯಲ್ಲಿ ಗಣೇಶ ಮೂರ್ತಿ ಕೂರಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಚಾಮರಾಜಪೇಟೆಯಲ್ಲಿ ಗಣೇಶ ಕೂರಿಸಿದ ಜಮೀರ್ ಖಾನ್
ಚಾಮರಾಜಪೇಟೆಯಲ್ಲಿ ಗಣೇಶ ಕೂರಿಸಿದ ಜಮೀರ್ ಖಾನ್

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಕೊನಗೂ ಚಾಮರಾಜಪೇಟೆಯಲ್ಲಿ ಗಣೇಶ ಮೂರ್ತಿ ಕೂರಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಚಾಮರಾಜಪೇಟೆ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಮತ್ತು ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಇದೀಗ ಕೊನೆಗೂ ಚಾಮರಾಜಪೇಟೆಯಲ್ಲಿ ಗಣೇಶ ಕೂರಿಸಿದ್ದಾರೆ. ಅರೆ ಇದೇನಿದು ಯುಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶವಿದೆಯಲ್ಲ ಎಂದು ಭಾವಿಸಬೇಡಿ.. ಜಮೀರ್ ಗಣೇಶ ಕೂರಿಸಿರುವುದು ಚಾಮರಾಜಪೇಟೆಯ ತಮ್ಮದೇ ಕಚೇರಿಯಲ್ಲಿ..

ಚಾಮರಾಜಪೇಟೆ ಮೈದಾನ ವಿಚಾರದ ಬಳಿಕ ಈ ಹಿಂದೆ ಜಮೀರ್ ಈ ಬಾರಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯರು ಮತ್ತು ಹಿಂದೂಪರ ಸಂಗಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸತತ 4 ಬಾರಿ ಶಾಸಕರಾಗಿದ್ದಾಗಲೂ ಅವರು ಒಂದು ಬಾರಿಯೂ ಗಣೇಶೋತ್ಸವ ಮಾಡಿಲ್ಲ. ಈಗ ಗಣೇಶೋತ್ಸವ ಮಾಡಲು ಮುಂದಾಗಿದ್ದಾರೆ. ಇದು ಹೊಸ ನಾಟಕ ಎಂದು ಹಲವರು ಆಕ್ಷೇಪಿಸಿದ್ದಾರೆ. ಜಮೀರ್ ಅಹ್ಮದ್ ಇಷ್ಟು ದಿನ ಕ್ಷೇತ್ರದ ಜನರನ್ನ ಗೂಬೆ ಮಾಡಿದ್ದಾರೆ. ಇನ್ಮುಂದೆ ಕ್ಷೇತ್ರದ ಜನರೇ ಜಮೀರ್​ ಅವರನ್ನು ಗೂಬೆ ಮಾಡುವ ಸಮಯ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನ ಪಾಠ ಕಲಿಸುತ್ತಾರೆ. ಗಣೇಶನ ಮುಖವಾಡ ಧರಿಸಿ ಕ್ಷೇತ್ರದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಸಮಯ ಬಂದಾಗ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಜಮೀರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. 

ವಿರೋಧಗಳ ನಡುವೆಯೇ ಗಣೇಶೋತ್ಸವ
ಇನ್ನು ವಿರೋಧಗಳ ನಡುವೆಯೇ ಇಂದು (ಸೆಪ್ಟೆಂಬರ್ 5) ಬೆಳಿಗ್ಗೆ 9:15ರಿಂದ 10 ಗಂಟೆಯ ಅವಧಿಯಲ್ಲಿ ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಶಾಸಕ ಜಮೀರ್ ಅಹ್ಮದ್ ಕಚೇರಿಯಲ್ಲಿಯೇ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಹಾಗೂ ಪೂಜೆ ನಡೆಸಿದ್ದಾರೆ. ಅಲ್ಲದೆ ಪೂಜೆ ಬಳಿಕ ಸ್ವತಃ ಜಮೀರ್ ಅಹ್ಮದ್ ಅವರೇ ಅನ್ನ ಸಂತರ್ಪಣೆ ಮಾಡಿದ್ದು, ಗಣೇಶೋತ್ಸವ ನಿಮಿತ್ತ ಇಂದು ಸಂಜೆ 4 ಗಂಟೆಗೆ ಬಾಣಬಿರುಸುಗಳ ಅದ್ಧೂರಿ ಮರವಣಿಗೆಯೊಂದಿಗೆ ವಿದ್ಯಾಗಣಪತಿ ಮೂರ್ತಿಯ ವಿಸರ್ಜನೆ ಕೂಡ ನಡೆಯಲಿದೆ. ಅಖಿಲ ಕರ್ನಾಟಕ ಜಿ.ಝೆಡ್.ಜಮೀರ್ ಅಹ್ಮದ್ ಖಾನ್ ಒಕ್ಕೂಟವು ಗಣೇಶೋತ್ಸವ ನಡೆಸುತ್ತಿದೆ.

ಈ ಬಗ್ಗೆ ಜಮೀರ್ ಕೂಡ ತಮ್ಮ ಸಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, 'ಚಾಮರಾಜಪೇಟೆಯ ನನ್ನ ಕಛೇರಿಯಲ್ಲಿ ಇಂದು ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ಥಳೀಯರಿಗೆ ಸಿಹಿ ಹಂಚಿ, ಅನ್ನ ಸಂತರ್ಪಣೆ ಮಾಡಿ ಅತ್ಯಂತ ಸಂಭ್ರಮ - ಸಡಗರದಿಂದ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದೆ.  ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಖಾನ್ ಹಾಗೂ ಮತ್ತಿತರರು ನನ್ನೊಂದಿಗಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.

ಪುತ್ರನ ಚಿತ್ರಕ್ಕೂ ವಿರೋಧ
ಜಮೀರ್ ಮೇಲೆ ಮಾತ್ರವಲ್ಲದೇ ಅವರ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರ ಕೂಡ ಹಿಂದೂಪರ ಸಂಘಟನೆಗಳ ವಿರೋಧ ಎದುರಿಸುತ್ತಿದ್ದು, ಈ ಹಿಂದೆ ಅವರ ನೂತನ ಚಿತ್ರ ಬನಾರಸ್ ವಿರುದ್ಧ #BocottBanaras ಹ್ಯಾಷ್ ಟ್ಯಾಗ್ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com