ಮುಂದಿನ ಆಗಸ್ಟ್ 15 ರೊಳಗೆ ಎಲ್ಲ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದು, ಮುಂದಿನ ಆಗಸ್ಟ್ 15ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲಾಗುವುದು,ಇದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಆದರೂ ಪರವಾಗಿಲ್ಲ ಎಂದರು.
ಹಲವು ನೂನ್ಯತೆಗಳನ್ನು ತೆಗೆದು ಹಾಕುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಹೊಸ ವಿಜ್ಞಾನದ ಯುಗಕ್ಕೆ ನಾವು ನಮ್ಮ ಮಕ್ಕಳನ್ನು ತಯಾರು ಮಾಡಬೇಕು. ಸಮಗ್ರವಾದ ದೇಶ ಭಕ್ತಿಯ ಕಲ್ಪನೆಯನ್ನು ನಾವು ಮಕ್ಕಳಲ್ಲಿ ಮೂಡಿಸುತ್ತಿದ್ದೇವೆ. ಜಗತ್ತಿನ ಬದಲಾವಣೆ ತಕ್ಕಂತೆ ಮಕ್ಕಳು ಬದಲಾವಣೆ ಆಗಬೇಕು ಎಂದರು.
25 ಸಾವಿರ ಕೋಟಿ ಹಣವನ್ನು ಶಿಕ್ಷಣ ಇಲಾಖೆಗೆ ಬಜೆಟ್ನಲ್ಲಿ ಕೊಟ್ಟಿದ್ದೇವೆ. 23 ಸಾವಿರ ಶಾಲೆಗಳಿಗೆ ಹೊಸದಾಗಿ ಕಟ್ಡಡ ಕಟ್ಟಬೇಕಿದೆ. ಹೀಗಾಗಿ ಮುಂದೆ ಹಂತ ಹಂತವಾಗಿ ಒಳ್ಳೆಯ ಕಟ್ಟಡ ಕಟ್ಟುತ್ತೇವೆ. ಇದಕ್ಕಾಗಿ 5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಮಾಡುತ್ತೇವೆ. ಬರುವ ವರ್ಷದಲ್ಲಿ ಎಷ್ಟು ನಿವೃತ್ತಿ ಹೊಂದುತ್ತಾರೋ ಅಷ್ಟೇ ನೇಮಕಾತಿ ಮಾಡುತ್ತೇವೆ. ಶಿಕ್ಷಕರು ಇಲ್ಲದೇ ಮಕ್ಕಳ ತರಗತಿ ನಡೆಯೋಕೆ ಸಾಧ್ಯ ಇಲ್ಲ. ಹೀಗಾಗಿ ಶಿಕ್ಷಕರ ಕ್ಷೇಮಾಭಿವೃದ್ಧಿ ಗೆ ಸರ್ಕಾರ ಬದ್ಧವಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ