
ಶಿವಮೊಗ್ಗ: ಖ್ಯಾತ ಸಕ್ರೆಬೈಲು ಆನೆ ಶಿಬಿರದಲ್ಲಿ ಪುಂಡಾನೆಯೊಂದು ಮಾವುತನನ್ನೇ ಅಟ್ಟಾಡಿಸಿಕೊಂಡು ಹೋಗಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ಸಕ್ರೇಬೈಲು ಆನೆ ಬಿಡಾರದ ಪುಂಡಾನೆಯೊಂದು ಮಾವುತ ಮತ್ತು ಕಾವಾಡಿಯ ಮೇಲೆ ದಾಳಿಗೆ ಯತ್ತಿಸಿದ ಘಟನೆ ಭಾನುವಾರ ನಡೆದಿದೆ. ಬಿಡಾರದ ಮಣಿಕಂಠ ಎಂಬ ಪುಂಡಾನೆಯು ಸಿಬ್ಬಂದಿಯ ಮೇಲೆ ದಾಳಿಗೆ ಯತ್ನಿಸಿದೆ. ಆನೆ ಮೇಲೆ ಕಾವಾಡಿಗನಿರುವಾಗಲೇ ಆನೆ ಪುಂಡಾಟಕ್ಕೆ ಯತ್ನಿಸಿರುವು ಆಘಾತಕ್ಕೆ ಕಾರಣವಾಗಿದೆ.
ಆನೆ ದಾಳಿಗೆ ಯತ್ನಿಸಿದ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಣಿಕಂಠ ಆನೆಯ ಕಾವಾಡಿ ಇಮ್ರಾನ್ ಬಿಡಾರದಿಂದ ಕಾಡಿಗೆ ಕರೆದೊಯ್ಯುತ್ತಿದ್ದ. ಈ ವೇಳೆ ಜಂಗಲ್ ರೆಸಾರ್ಟ್ ಬಳಿ ಬಂದಾಗ ಹಿಂಬಾಲಿಸಿಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದ ಮಾವುತ ಖಲೀಲ್ ನನ್ನು ಮಣಿಕಂಠ ಆನೆ ತಿರುಗಿ ನೋಡಿದೆ. ಆತನನ್ನು ನೋಡುತ್ತಲೇ ಮಾವುತನ ಮೇಲಿನ ಸೇಡಿಗೆ ಅಕ್ರಮಣ ಮಾಡಲು ಯತ್ನಿಸಿದೆ.
ಆಕ್ರಮಣ ಸುಳಿವು ದೊರೆತ ಬೆನ್ನಲ್ಲೇ ಮಾವುತ ಖಲೀಲ್ ಸ್ಕೂಟಿ ಬಿಟ್ಟು ಓಡಿದ್ದಾರೆ. ಈ ವೇಳೆ ಆನೆಯು ಅಲ್ಲಿದ್ದ ಕಾರಿನ ಬಳಿಯೇ ಕೋಪದಲ್ಲಿ ಬಂದಿದೆ. ಈ ವೇಳೆ ಖಲೀಲ್ ಮತ್ತೊಂದು ಕಡೆಯಿಂದ ಬಂದಿದ್ದಾನೆ. ಪುಂಡಾನೆ ಮಣಿಕಂಠ ಮಾವುತ ಖಲೀಲ್ ನನ್ನು ಮಾತ್ರ ಅಟ್ಟಾಡಿಸಿಕೊಂಡು ಹೋಗಿದೆ. ಹಿಗಾಗಿ ಕಾರಿನಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಣಿಕಂಠ ಎರಡೆರಡು ಬಾರಿ ಮಾವುತನ ಮೇಲೆ ದಾಳಿಗೆ ಮುಂದಾಗಿದೆ. ಬಳಿಕ ಬಿಡಾರದ ಸಿಬ್ಬಂದಿ ಕುಮ್ಕಿ ಆನೆಗಳ ಸಹಾಯದಿಂದ ಮಣಿಕಂಠನನ್ನು ಕಟ್ಟಿಹಾಕಿದ್ದಾರೆ. ಈ ಹಿಂದೆ ಕೂಡ ಮಣಿಕಂಠ ಆನೆ ಹಲವು ಬಾರಿ ಬಿಡಾರದ ಸಿಬ್ಬಂದಿ ಮೇಲೆ ದಾಳಿ ಮಾಡಿತ್ತು. ತುಂಗಾನದಿಯಲ್ಲಿ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ಮಾಡಿತ್ತು. ತನ್ನ ಆಕ್ರಮಣಕಾರಿ ಬುದ್ಧಿಯಿಂದಲೇ ಬಿಡಾರದಲ್ಲಿ ಮಣಿಕಂಠ ಪುಂಡಾನೆ ಎಂದೇ ಕುಖ್ಯಾತಿ ಪಡೆದಿದೆ.
Advertisement