ಬೆಂಗಳೂರು: ರಾಜಕಾಲುವೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ತನ್ನ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ ಕಾಲುವೆಗಳಿಗೆ ತ್ಯಾಜ್ಯ ಮತ್ತು ಮಾಲಿನ್ಯಕಾರಕಗಳನ್ನು ಸುರಿಯುವುದನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಕ್ಟೋಬರ್ 12 ರಂದು ನಡೆಯಲಿರುವ ಮುಂದಿನ ವಿಚಾರಣೆಯ ದಿನಾಂಕದಂದು ಅಥವಾ ಮೊದಲು ಈ ಸಂಬಂಧ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿದೆ.
ನಗರದ ಪ್ರವಾಹ ಪರಿಸ್ಥಿತಿಯನ್ನು ತೋರಿಸುವ ಛಾಯಾಚಿತ್ರಗಳನ್ನು ನೀಡಿ ನ್ಯಾಯಾಲಯದ ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಅವರು ಸಲ್ಲಿಸಿದ್ದ ಮನವಿಯ ಮೇರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ವಿಭಾಗೀಯ ಪೀಠ ಜೂನ್ 18, 2019 ರ ಆದೇಶದಲ್ಲಿ ನೀಡಿದ ನಿರ್ದೇಶನವನ್ನು 18 ತಿಂಗಳುಗಳು ಕಳೆದರೂ ಪಾಲನೆ ಮಾಡಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದು, ರಾಜ ಕಾಲುವೆಗಳ ಸಮೀಕ್ಷೆ ಮಾಡುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಹಾಗೆ ಮಾಡುವಾಗ, ಈ ನಿರ್ದೇಶನಗಳ ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮಗಳನ್ನು ದಾಖಲೆಯಲ್ಲಿ ಇರಿಸಲು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಎರಡಕ್ಕೂ ಆರು ವಾರಗಳ ಕಾಲಾವಕಾಶವನ್ನು ನೀಡಿತು. ಆದರೆ ಅದನ್ನು ಪಾಲಿಸಲಾಗಿಲ್ಲ ಎಂದು ಅರ್ಜಿದಾರರು ತಮ್ಮ ವಕೀಲ ಜಿ ಆರ್ ಮೋಹನ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು.
ಕೆರೆಗಳ ಒತ್ತುವರಿ: ಜುಲೈ 15 ಮತ್ತು 20, 2022 ರ ಆದೇಶದಲ್ಲಿ ಹೊರಡಿಸಲಾದ ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ ಸುಬ್ರಹ್ಮಣ್ಯಪುರ ಕೆರೆ ಮತ್ತು ಬೇಗೂರು ಕೆರೆಯ ನಿಯೋಜಿತ ಅಧಿಕಾರಿಗಳು ನ್ಯಾಯಾಲಯಕ್ಕೆ ಅನುಸರಣೆ ಅಫಿಡವಿಟ್ ಸಲ್ಲಿಸಿದರು. ಈ ಅಫಿಡವಿಟ್ ಪ್ರಕಾರ ಬೇಗೂರು ಕೆರೆಯಲ್ಲಿ 81 ಖಾಸಗಿ ಅತಿಕ್ರಮಣಗಳು ಪತ್ತೆಯಾಗಿದ್ದು, 33ನ್ನು ತೆರವುಗೊಳಿಸಲಾಗಿದೆ.
ಸುಬ್ರಹ್ಮಣ್ಯಪುರ ಕೆರೆಗೆ ಸಂಬಂಧಿಸಿದಂತೆ ಒಂದು ಎಕರೆ 17 ಗುಂಟೆ ಅಳತೆಯ ಜಮೀನನ್ನು ಲಿಂಕ್ ರಸ್ತೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು, 3 ಎಕರೆ 39 ಗುಂಟಗಳನ್ನು ಕೊಳೆಗೇರಿ ನಿವಾಸಿಗಳು ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಸ್ಲಂ ನಿವಾಸಿಗಳ ಒತ್ತುವರಿ ಸ್ಲಂ ತೆರವು ಮಂಡಳಿಯಿಂದ ಆಗಬೇಕಿದೆ ಎಂದು ಸೂಚಿಸಿದರು. ನಂತರ ನ್ಯಾಯಾಲಯವ ಅಕ್ಟೋಬರ್ 12, 2022 ರಂದು ತನ್ನ ಮುಂದೆ ಹಾಜರಾಗುವಂತೆ ಸ್ಲಂ ಬೋರ್ಡ್ನ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಸೂಚಿಸಿತು.
ಪುಟ್ಟೇನಹಳ್ಳಿ ಕೆರೆಗೆ ಸಂಬಂಧಿಸಿದಂತೆ ಜುಲೈ 20, 2022 ರ ಆದೇಶದ ಹೊರತಾಗಿಯೂ ಅತಿಕ್ರಮಣ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದ ಅಥವಾ ಅನುಸರಣಾ ವರದಿ ಸಲ್ಲಿಸದ ಬಿಬಿಎಂಪಿ ಬೊಮ್ಮನಹಳ್ಳಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಗೆ ಸೂಚಿಸಿತು.
Advertisement