ಚನ್ನಪಟ್ಟಣ: ಭಾರಿ ಮಳೆ, ಪ್ರವಾಹಕ್ಕೆ ಮುಳುಗಿದ ಶಾಲೆ; ದೇವಸ್ಥಾನದಲ್ಲಿ ಅಕ್ಷಾರಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು!
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತತ್ತರಿಸಿ ಮೂರು ವಾರಗಳೇ ಕಳೆದರೂ, ಹಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ. ಭಾರಿ ಮಳೆ, ಪ್ರವಾಹಕ್ಕೆ ಸರ್ಕಾರಿ ಶಾಲೆಯೊಂದು ಮುಳುಗಿದ್ದು, ವಿದ್ಯಾರ್ಥಿಗಳು ಬೇರೆ ಮಾರ್ಗವಿಲ್ಲದೇ ಸ್ಥಳೀಯ ದೇವಸ್ಥಾನದಲ್ಲಿ ಪಾಠ ಕೇಳುವಂತಾಗಿದೆ.
Published: 19th September 2022 08:42 AM | Last Updated: 19th September 2022 05:15 PM | A+A A-

ಜಲಾವೃತ ಸರ್ಕಾರಿ ಶಾಲೆ, (ಒಳಚಿತ್ರ) ತರಗತಿಗಳನ್ನು ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. (ಫೋಟೋ | ವಿನೋದ್ ಕುಮಾರ್ ಟಿ, ಇಪಿಎಸ್)
ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತತ್ತರಿಸಿ ಮೂರು ವಾರಗಳೇ ಕಳೆದರೂ, ಹಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ. ಭಾರಿ ಮಳೆ, ಪ್ರವಾಹಕ್ಕೆ ಸರ್ಕಾರಿ ಶಾಲೆಯೊಂದು ಮುಳುಗಿದ್ದು, ವಿದ್ಯಾರ್ಥಿಗಳು ಬೇರೆ ಮಾರ್ಗವಿಲ್ಲದೇ ಸ್ಥಳೀಯ ದೇವಸ್ಥಾನದಲ್ಲಿ ಪಾಠ ಕೇಳುವಂತಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ಪಟ್ಟಣದ ತಟ್ಟೆಕೆರೆ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇನ್ನೂ ಶಾಲೆಗೆ ಪ್ರವೇಶಿಸಲಾಗದೆ ಬವಣೆ ಪಡುತ್ತಿದ್ದಾರೆ. ಶಾಲೆಯಲ್ಲಿ ಈಗಲೂ ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಬೆಂಗಳೂರಿಗೆ ಹೊಸ ತಲೆನೋವು: ಪ್ರವಾಹ ಇಳಿಮುಖವಾದ ನಂತರ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳಲ್ಲಿ ಏರಿಕೆ!
ಸ್ಥಳೀಯ ಅಧಿಕಾರಿಗಳು ಶಾಲಾ ಆವರಣದಲ್ಲಿ ನಿಂತಿರುವ ನೀರು ತೆಗೆಯಲು ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ಹತ್ತಿರದ ದೇವಸ್ಥಾನದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ತಟ್ಟೆಕೆರೆ ಬೆಂಗಳೂರಿನಿಂದ 60 ಕಿಮೀ ಮತ್ತು ರಾಮನಗರದಿಂದ 11 ಕಿಮೀ ದೂರದಲ್ಲಿದೆ. ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದಾರೆ. ಮಧ್ಯಾಹ್ನದ ಊಟ ತಯಾರಿಸಲು ಅಡುಗೆಯವರು ಸೇರಿದಂತೆ ಐವರು ಶಿಕ್ಷಕರು ಹಾಗೂ ಇಬ್ಬರು ಸಿಬ್ಬಂದಿ ಈ ಶಾಲೆಯಲ್ಲಿದ್ದಾರೆ.
ಶೌಚಾಲಯದ ಕೊರತೆಯಿಂದ ಶಿಕ್ಷಕರು, ವಿದ್ಯಾರ್ಥಿನಿಯರಿಗೆ ತೊಂದರೆ
ಗೌರಿ-ಗಣೇಶ ಹಬ್ಬಕ್ಕೆ ಒಂದು ವಾರ ಮುನ್ನ ಅಂದರೆ ಆಗಸ್ಟ್ 26ರಂದು ಸಮೀಪದಲ್ಲೇ ಇದ್ದ ಸಣ್ಣದೊಂದು ನೀರಿನ ಕಟ್ಟೆ ಒಡೆದು ಶಾಲೆಗೆ ನೀರು ನುಗ್ಗಿತ್ತು. ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಲಕ್ಷ್ಮಿಅವರು ಈ ಕುರಿತು ಮಾತನಾಡಿ ಮಧ್ಯಾಹ್ನದ ಊಟಕ್ಕೆ ಇಟ್ಟಿದ್ದ ಧಾನ್ಯಗಳೆಲ್ಲವೂ ನೀರಿನಲ್ಲಿ ಮುಳುಗಿ ಹಾಳಾಗಿವೆ. ಶಾಲೆಯೊಳಗೆ ನಾಲ್ಕು ಅಡಿಗಳಷ್ಟು ನೀರು ಇರುವುದರಿಂದ ನಾವು ಪ್ರವೇಶಿಸಲು ಸಾಧ್ಯವಿಲ್ಲ. ಈ ಶಾಲೆಯು ತಗ್ಗು ಪ್ರದೇಶದಲ್ಲಿದೆ. ನೀರನ್ನು ತೆಗೆದರೂ, ಅದು ಹತ್ತಿರದ ಕೆರೆಯಿಂದ ಪ್ರವೇಶಿಸುತ್ತಲೇ ಇರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಒಂದೂವರೆ ಅಡಿ ನೀರಿನಲ್ಲಿ ನಿಮ್ಮನ್ನು ದೋಣಿಯಲ್ಲಿ ಕರೆದುಕೊಂಡು ಹೋದ ಪುಣ್ಯಾತ್ಮ ಯಾರು? ಸಿದ್ದರಾಮಯ್ಯಗೆ ಸಿಎಂ ಪ್ರಶ್ನೆ
ಕುಡಿಯುವ ಮತ್ತು ಅಡುಗೆ ಉದ್ದೇಶಕ್ಕಾಗಿ ಸ್ಥಳೀಯ ನಿವಾಸಿಗಳಿಂದ ನೀರು ಪಡೆಯಲಾಗುತ್ತಿದೆ. ವಸತಿ ಪ್ರದೇಶದ ಮಧ್ಯದಲ್ಲಿರುವ ಕಟ್ಟೆಮನೆಯ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೀಗ ತಾತ್ಕಾಲಿಕವಾಗಿ ತರಗತಿಗಳು ನಡೆಯುತ್ತಿವೆ. ಎಲ್ಲಾ ವರ್ಗದ ಮಕ್ಕಳನ್ನು ಚಿಕ್ಕ ಜಾಗದಲ್ಲಿ ತುಂಬಿಸಲಾಗುತ್ತದೆ. ಕೆಲವು ದಿನಗಳವರೆಗೆ, ನಿವಾಸಿಗಳು ಮಧ್ಯಾಹ್ನದ ಊಟವನ್ನು ತಯಾರಿಸಲು ಹಣ ಮತ್ತು ಪಡಿತರವನ್ನು ಸಂಗ್ರಹಿಸಿ ಕೊಟ್ಟಿದ್ದರು. ಕೆಲವು ದಿನಗಳ ನಂತರ ಅಧಿಕಾರಿಗಳು ಆಹಾರಧಾನ್ಯಗಳನ್ನು ಕಳುಹಿಸುತ್ತಿದ್ದಾರೆ. ಊಟ ಮಾಡಲು ಸ್ಥಳವಿಲ್ಲದೇ ಸಮೀಪದ ನಿವಾಸಿಯೊಬ್ಬರ ಮನೆಯಲ್ಲಿ ಲಕ್ಷ್ಮಿ ಅಡುಗೆ ಮಾಡುತ್ತಿದ್ದಾರೆ.
ಕೇವಲ ಮಳೆ, ಪ್ರವಾಹವಷ್ಟೇ ಅಲ್ಲದೇ ಈ ಶಾಲೆಯಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಕೂಡ ಇಲ್ಲ.
ಶೌಚಾಲಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಸಹ ಕಷ್ಟಪಡುತ್ತಿದ್ದಾರೆ, ಕೆಲವು ನಿವಾಸಿಗಳು ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ತಮ್ಮ ಶೌಚಾಲಯವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದೆ. ಎರಡು ತಿಂಗಳಲ್ಲಿ ಕನಿಷ್ಠ ಒಂದು ತರಗತಿಯಾದರೂ ಸಿದ್ಧವಾಗಲಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಶಿಸುತ್ತಾರೆ. ಆದರೆ ಹೊಸ ಕಟ್ಟಡದಲ್ಲಿ ಇನ್ನೂ ಶೌಚಾಲಯ ನಿರ್ಮಾಣವಾಗಿಲ್ಲ. ಶಿಕ್ಷಣ ಇಲಾಖೆ ಶೌಚಾಲಯ ನಿರ್ಮಿಸಿಕೊಡಬೇಕು, ಇಲ್ಲವಾದಲ್ಲಿ ಅನೇಕ ವಿದ್ಯಾರ್ಥಿನಿಯರು ವ್ಯಾಸಂಗವನ್ನೇ ಬಿಡುತ್ತಾರೆ’ ಎಂದು ನಿವಾಸಿಯೊಬ್ಬರು ಹೇಳಿದರು.