ಬೆಂಗಳೂರು: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಿವಾಸಿಯಾಗಿರುವ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರಾಗಿರುವ 63 ವರ್ಷದ ವ್ಯಕ್ತಿಯೊಬ್ಬರು ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯೊಳಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳಿಂದ ವಂಚನೆಗೊಳಗಾಗಿದ್ದಾರೆ.
ಆರೋಪಿಗಳಲ್ಲಿ ಒಬ್ಬಾತ ಕೆಎಎಸ್ ಅಧಿಕಾರಿ ಮತ್ತು ಸಹಾಯಕ ಆಯುಕ್ತ ಎಂದು ಹೇಳಿಕೊಂಡಿದ್ದಾನೆ.
ಬೆಂಗಳೂರು ಮತ್ತು ಬಂಟ್ವಾಳವನ್ನು ಸಂಪರ್ಕಿಸುವ NH-275 ಗಾಗಿ ಬಿಡದಿಯಲ್ಲಿನ ತನ್ನ ಪ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಂತ್ರಸ್ತ ವಿ.ಹೆಚ್. ರುದ್ರಯ್ಯ ಅವರು ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ಕೋರಿ ಮಧ್ಯಸ್ಥಿಕೆ ಪ್ರಕರಣವನ್ನು ದಾಖಲಿಸಿದ್ದರು. ಆರೋಪಿಯು ಸಂತ್ರಸ್ತರಿಗೆ ಕರೆ ಮಾಡಿ, ಹೆಚ್ಚಿನ ಪರಿಹಾರದೊಂದಿಗೆ ಪ್ರಕರಣವು ನಿಮ್ಮ ಪರವಾಗಿಯೇ ಇತ್ಯರ್ಥವಾಗಿದೆ. ಹೆಚ್ಚಿನ ಪರಿಹಾರವನ್ನು ಪಡೆಯಲು ತನ್ನ ಕಡೆಗೂ ದಯೆ ತೋರುವಂತೆ ಮತ್ತು ನಗದು ರೂಪದಲ್ಲಿ ಉಡುಗೊರೆಯನ್ನು ನೀಡುವಂತೆ ಕೇಳಿದ್ದಾನೆ.
ಈ ಮಾತನ್ನು ನಂಬಿದ ರುದ್ರಯ್ಯ ಅವರು ಕಚೇರಿಗೆ ತೆರಳಿ 1.7 ಲಕ್ಷ ರೂ. ನಗದನ್ನು ಆರೋಪಿಗೆ ನೀಡಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ಅವರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತ ವಾರ್ಗಾವಣೆಯಾಗಿದ್ದಾಗ, ಅನುಮಾನಗೊಂಡು ತಹಶೀಲ್ದಾರ್ ಅವರನ್ನು ಬೇಟಿ ಮಾಡಿ ಪರಿಶೀಲಿಸಿದಾಗ ತಾನು ಮೋಸಹೋಗಿರುವುದು ತಿಳಿದಿದೆ. ಈ ಬಗ್ಗೆ ರುದ್ರಯ್ಯ ಶನಿವಾರ ದೂರು ದಾಖಲಿಸಿದ್ದಾರೆ.
ತಮ್ಮದು ಡಿಸಿ ಪರಿವರ್ತಿತ ಪ್ಲಾಟ್ ಆಗಿರುವುದರಿಂದ ಹೆಚ್ಚಿನ ಪರಿಹಾರವನ್ನು ಪಡೆಯಲು ತಾವು 2020ರಲ್ಲಿ ಮಧ್ಯಸ್ಥಿಕೆ ಪ್ರಕರಣವನ್ನು ದಾಖಲಿಸಿರುವುದಾಗಿ ರುದ್ರಯ್ಯ ಅವರು ಟಿಎನ್ಐಇಗೆ ತಿಳಿಸಿದ್ದಾರೆ.
'ಶುಕ್ರವಾರ, ಡಿಸಿ ಕಚೇರಿಯಲ್ಲಿ ಕೆಲಸ ಮಾಡುವ ಸಹಾಯಕ ಆಯುಕ್ತ ರಾಜೇಂದ್ರ ಪ್ರಸಾದ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ 46.75 ಲಕ್ಷ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಸಂಜೆಯೊಳಗೆ ನನ್ನ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.
ಪರಿಹಾರವನ್ನು ಪಡೆಯುವಲ್ಲಿನ ‘ಪ್ರಯತ್ನ’ಕ್ಕಾಗಿ ಆರೋಪಿಯು 1.7 ಲಕ್ಷ ರೂಪಾಯಿ ಉಡುಗೊರೆ ನೀಡುವಂತೆ ಕೇಳಿದನು. ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ಮಾಡಲಾಗಿತ್ತು. ಕೂಡಲೇ ಹಣ ನೀಡುವಂತೆ ಸೂಚಿಸಿದ್ದರಿಂದ ನಾನು ಬೆಳಗ್ಗೆ 11.45ರ ಸುಮಾರಿಗೆ ಡಿಸಿ ಕಚೇರಿಗೆ ತೆರಳಿ ಆತನ ನಿರ್ದೇಶನದಂತೆ 201ರ ಕೊಠಡಿ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ನಗದನ್ನು ನೀಡಿದೆ. ಆತ ಆರೋಪಿ ಮಾಸ್ಕ್ ಹಾಕಿಕೊಂಡಿದ್ದ. ಮೀಟಿಂಗ್ನಲ್ಲಿದ್ದಾರೆ ಎಂದು ಹೇಳಿ ಎಸಿಯನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ. ಸಂಜೆ 4.30ಕ್ಕೆ ನನ್ನ ಬ್ಯಾಂಕ್ ಖಾತೆಗೆ ಹಣ ಬರಲಿದೆ ಎಂದು ಭರವಸೆ ನೀಡಿದರು. ನಾನು ನನ್ನ ಖಾತೆಯನ್ನು ಪರಿಶೀಲಿಸಿದಾಗ ಹಣ ಇರಲಿಲ್ಲ' ಎಂದು ಅವರು ಹೇಳಿದರು.
ಕೂಡಲೇ ಮೊದಲ ಆರೋಪಿಯ ನಂಬರ್ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿರುವುದನ್ನು ತಿಳಿದು ಆಘಾತಗೊಂಡಿದ್ದಾರೆ. ಮರುದಿನ ಅವರು ಡಿಸಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಅವರು ಹೇಳಿದ ಸಹಾಯಕ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾಗಿ ಹೇಳಿದರು.
ಆರೋಪಿಗಳಿಗೆ ಡಿಸಿ ಕಚೇರಿಯ ಕಾರ್ಯಗಳು ತಿಳಿದಿದ್ದವು
'ಆರೋಪಿಗಳಿಗೆ ಡಿಸಿ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿತ್ತು. ಆರೋಪಿಗಳು ಸಂತ್ರಸ್ತರ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಜೊತೆಗೆ ಅವರು ಜಿಲ್ಲಾಧಿಕಾರಿ ಕಚೇರಿಗೂ ನಿಯಮಿತವಾಗಿ ಬಂದುಹೋಗಿರುತ್ತಾರೆ. ಏಕೆಂದರೆ ಅವರು ತಮ್ಮ ಮಧ್ಯಸ್ಥಿಕೆ ಪ್ರಕರಣದ ಬಗ್ಗೆ ತಿಳಿದಿದ್ದರು. ಹಣ ಪಡೆದ ವ್ಯಕ್ತಿಯ ಸಿಸಿಟಿವಿ ದೃಶ್ಯಾವಳಿಗಳು ನಮಗೆ ಸಿಕ್ಕಿವೆ' ಎಂದು ಅಧಿಕಾರಿಯೊಬ್ಬರು ಹೇಳಿದರು.
ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.
Advertisement