ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ: ಇಂದು ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು

ಚೈತ್ರ ಪೌರ್ಣಮಿಯ ಬೆಳದಿಂಗಳಲ್ಲಿ ಐತಿಹಾತಿಕ ಬೆಂಗಳೂರು ಕರದ ಶಕ್ತ್ಯೋತ್ಸವವು ಗುರುವಾರ ಮಧ್ಯರಾತ್ರಿ ವಿಜೃಂಭಣೆಯಿಂದ ಜರುಗಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಧರ್ಮರಾಯ ಸ್ವಾಮಿ ದೇವಾಲಯ (ಸಂಗ್ರಹ ಚಿತ್ರ)
ಧರ್ಮರಾಯ ಸ್ವಾಮಿ ದೇವಾಲಯ (ಸಂಗ್ರಹ ಚಿತ್ರ)

ಬೆಂಗಳೂರು: ಚೈತ್ರ ಪೌರ್ಣಮಿಯ ಬೆಳದಿಂಗಳಲ್ಲಿ ಐತಿಹಾತಿಕ ಬೆಂಗಳೂರು ಕರದ ಶಕ್ತ್ಯೋತ್ಸವವು ಗುರುವಾರ ಮಧ್ಯರಾತ್ರಿ ವಿಜೃಂಭಣೆಯಿಂದ ಜರುಗಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಪೌರ್ಣಮಿಯ ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ. ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗವನ್ನು ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಹೊರಲಿದ್ದಾರೆ.

ಕರಗ ಹೊರಲಿರುವ ಜ್ಞಾನೇಂದ್ರ ಅವರು ಬೆಳಿಗ್ಗೆ 10.301ಕ್ಕೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೌಡರು, ಗಣಾಚಾರಿ ಹಾಗೂ ಗಂಟೆ ಪೂಜಾರಿಗಳ ಜತೆ ಮೊದಲನೇ ಸ್ನಾನಘಟ್ಟ ಕಬ್ಬನ್‍ಪಾರ್ಕ್‍ನ ಕರಗದ ಕುಂಟೆಗೆ ತೆರಳಿ ಅಲ್ಲಿ ಪ್ರಥಮ ಪೂಜೆ, ಗಂಗೆ ಪೂಜೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಈ ಮೆರವಣಿಗೆಯು ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ಬಳೆಪೇಟೆ, ದೊಡ್ಡಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ಹಲಸೂರು, ಕೆಆರ್‌ಮಾರುಕಟ್ಟೆ, ಕಾಟನ್‌ಪೇಟೆ ಮತ್ತಿತರ ಪ್ರದೇಶಗಳಲ್ಲಿ ಸುಮಾರು 38 ಕಿ.ಮೀ ಸಂಚರಿಸಿ ಮರಳಿ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಶುಕ್ರವಾರ ಮಧ್ಯರಾತ್ರಿ 12.30ಕ್ಕೆ ಕರಗ ಮೆರವಣಿಗೆ ದೇವಸ್ಥಾನದಿಂದ ಹೊರ ಬರಲಿದೆ.

ಈ ನಡುವೆ ಹಜರತ್ ತವಕ್ಕಲ್ ಮಸ್ತಾನ್ ಸಾಹೇಬ್ ದರ್ಗಾಕ್ಕೆ ಕರಗ ಪ್ರವೇಶ ಮಾಡುವುದಕ್ಕೆ ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತವಾಗಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ಕರಗ ಸಮತಿಯು, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ಇದು ಧಾರ್ಮಿಕ ಸೌಹಾರ್ದತೆಯ ದ್ಯೋತಕವಾಗಿದ್ದು, ಇಜರಲ್ಲಿ ಯಾವುದೇ ಬದಲಾವಣೆಯಿಲ್ಲ. ಆಚರಣೆ ಮುಂದುವರಿಯಲಿದೆ ಎಂದು ಹೇಳಿದೆ.

ದಾರಿಯಲ್ಲಿ ಹಿಂದೂ ದೇವಾಲಯಗಳಿಗೆ ಹೇಗೆ ಭೇಟಿ ನೀಡುತ್ತದೋ ಅದೇ ರೀತಿಯಲ್ಲಿಯೇ ಕರಗ ದರ್ಗಾಕ್ಕೂ ಭೇಟಿ ನೀಡಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಯಾವುದೇ ರಾಜಕೀಯ ಭಾಷಣ ಅಥವಾ ಚನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು ಎಂದು ಸಂಘಟಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.

ಸಂಚಾರ ಮಾರ್ಗಗಳಲ್ಲಿ ಬದಲಾವಣೆ
ಕೆ.ಆರ್.ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಕಾಟನ್‌ಪೇಟೆ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ವಾಟಾಳ್ ನಾಗರಾಜ್ ರಸ್ತೆ ಮತ್ತು ಬಿನ್ನಿ ಮಿಲ್ ರಸ್ತೆಯಿಂದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಎಎಸ್ ಚಾರ್ ರಸ್ತೆಯಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆಗೆ ಬರುವ ವಾಹನಗಳು ಮೈಸೂರು ರಸ್ತೆಯ ಎಎಸ್ ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ಸರ್ಕಲ್-ರಾಯನ್ ಸರ್ಕಲ್ ಮೂಲಕ ಸಾಗಬಹುದಾಗಿದೆ.

ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದ ಕಡೆಗೆ ಸಂಚರಿಸುವ ವಾಹನಗಳನ್ನು ಚಿಕ್ಕಪೇಟೆ ವೃತ್ತದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.

ಕರಗ ಉತ್ಸವ ವೀಕ್ಷಿಸಲು ಬಯಸುವ ಜನರು ಬನ್ನಪ್ಪ ಪಾರ್ಕ್ ಮತ್ತು ಟೌನ್ ಹಾಲ್‌ನಲ್ಲಿ ವಾಹನಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com