ಬೆಂಗಳೂರು: ಹಳೆ ವೈಷಮ್ಯ; ಬಿಯರ್ ಬಾಟಲಿಯಿಂದ ಹೊಡೆದು ರೌಡಿ ಕೊಲೆ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ  ಗಲಾಟೆ ನಡೆದು ಬಿಯರ್ ಬಾಟಲ್ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ರೌಡಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ  ಗಲಾಟೆ ನಡೆದು ಬಿಯರ್ ಬಾಟಲ್ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ರೌಡಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಸಿಕೆ ಅಚ್ಚುಕಟ್ಟು ನಿವಾಸಿ ಶಿವರಾಜು(29) ಕೊಲೆಯಾದ ರೌಡಿ. ಈತ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ರೌಡಿ ಶೀಟರ್. ಶಿವರಾಜು ಪೇಂಟರ್ ವೃತ್ತಿ ಮಾಡುತ್ತಿದ್ದನು. ರಾತ್ರಿ 10.30ರ ಸುಮಾರಿಗೆ ಈತ ಇಟ್ಟಮಡು ರಸ್ತೆಯಲ್ಲಿನ ಸ್ಪೈಸ್ ಬಾರ್‍ ಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ.

ಅದೇ ಸಮಯದಲ್ಲಿ ಮಂಜ ಎಂಬಾತ ತನ್ನ ಗುಂಪಿನೊಂದಿಗೆ ಬಾರ್‍ ಗೆ ಬಂದು ಮದ್ಯ ಸೇವಿಸುತ್ತಿದ್ದಾಗ ಈ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಆ ವೇಳೆ ಬಾರ್‍ ನವರು ಜಗಳ ಬಿಡಿಸಿ ಹೊರಗೆ ಕಳುಹಿಸಿದ್ದಾರೆ. ಹೊರಗೆ ಬಂದ ಶಿವರಾಜು ಹಾಗೂ ಮಂಜನ ಗುಂಪಿನ ನಡುವೆ ಮತ್ತೆ ಬಾರ್ ಮುಂಭಾಗದ ರಸ್ತೆಯಲ್ಲಿ ಜಗಳವಾಗಿ ಎರಡೂ ಕಡೆಯವರು ಕೈಕೈ ಮಿಲಾಯಿಸಿಕೊಂಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿದಾಗ ಮಂಜ ಬಿಯರ್ ಬಾಟಲಿನಿಂದ ಶಿವರಾಜ್‍ನ ತಲೆಗೆ ಹಲ್ಲೆ ನಡೆಸಿದ್ದಲ್ಲದೆ, ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿವರಾಜು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಅಕ್ಕ-ಪಕ್ಕದ ನಿವಾಸಿಗಳು ಜಗಳ ನಡೆಯುತ್ತಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ಶಿವರಾಜನನ್ನು ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ನಿಮ್ಹಾನ್ಸ್‍ನಲ್ಲೂ ಚಿಕಿತ್ಸೆ ಕೊಡಿಸಿ ತದ ನಂತರ ಸಾಗರ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೇ ಶಿವರಾಜು ಮೃತಪಟ್ಟಿದ್ದಾನೆ.

ಈ ಹಿಂದೆಯೂ ಮಂಜ ಮತ್ತು ಶಿವರಾಜು ನಡುವೆ ಜಗಳ ನಡೆದಿತ್ತು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com