ಬೆಂಗಳೂರು: ಮಧುರೈ ವಿಭಾಗದ ಮಲವಿಟ್ಟನ್ ರೈಲು ನಿಲ್ದಾಣದಿಂದ ಹಾವೇರಿ ನಿಲ್ದಾಣದವರೆಗೆ 2408 ಟನ್ ರಸಗೊಬ್ಬರದ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲೋಡ್ ಗೂಡ್ಸ್ ರೈಲಿನ 6 ಬೋಗಿಗಳು ಹಳಿ ತಪ್ಪಿದ್ದು, ಪರಿಣಾಮ 12 ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗುವಂತೆ ಮಾಡಿದೆ.
ಘಟನೆಯಲ್ಲಿ ಯಾವುದೇ ಸಿಬ್ಬಂದಿಗೂ ಗಾಯಗಳಾಗಿಲ್ಲ. ರೈಲಿನಲ್ಲಿದ್ದ ಲೋಕೋ ಪೈಲಟ್ (ಎಲ್ಪಿ), ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಬಳಿಕ ಈ ಮಾರ್ಗದಲ್ಲಿ ಓಡಾಡುವ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದ್ದು, 8 ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ. ಸದ್ಯ ಈ ಮಾರ್ಗವನ್ನು ಮುಚ್ಚಲಾಗಿದ್ದು ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ನೈಋತ್ಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಶುಕ್ರವಾರ ಮುಂಜಾನೆ 2.12 ಗಂಟೆಗೆ ಬೆಂಗಳೂರು-ಸೇಲಂ ವಿಭಾಗದ ಮಾರಂಡಹಳ್ಳಿ ಮತ್ತು ರಾಯಕ್ಕೊಟ್ಟೈ ನಿಲ್ದಾಣಗಳ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ರೈಲು ಹಳಿ ತಪ್ಪಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನಲ್ಲಿ ಒಟ್ಟು 42 ವ್ಯಾಗನ್ಗಳಿದ್ದು, 6 ವ್ಯಾಗನ್ಗಳು ಹಳಿ ತಪ್ಪಿವೆ. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಬೆಂಗಳೂರು ವಿಪತ್ತು ನಿರ್ವಹಣಾ ತಂಡವು ಅಪಘಾತ ಪರಿಹಾರ ರೈಲಿನೊಂದಿಗೆ ಬೆಳಗಿನ ಜಾವ 3 ಗಂಟೆಗೆ ಹಳಿ ತಪ್ಪಿದ ಸ್ಥಳಕ್ಕೆ ತೆರಳಿ, ಪುನಃಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ಘಟನೆ ಬಳಿಕ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೆಎಸ್ಆರ್ ಬೆಂಗಳೂರು-ಜೋಲಾರ್ಪೇಟ್ಟೈ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು. ಕೆಎಸ್ಆರ್ನಿಂದ ಬೆಳಗ್ಗೆ 8.45ಕ್ಕೆ ಮತ್ತು ಜೋಲಾರ್ಪೇಟೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿತ್ತು. ಸೇಲಂ ಮತ್ತು ಧರ್ಮಪುರಿಯಿಂದ ಹೊರಡುವ ಸೇಲಂ - ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ. 16212) - ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ. 06278) ಧರ್ಮಪುರಿಯಿಂದ ಹೊರಡುತ್ತವೆ.
ಮಾರ್ಗ ಬದಲು...
ತಿರುನೆಲ್ವೇಲಿ - ದಾದರ್ ಎಕ್ಸ್ಪ್ರೆಸ್, ಟುಟಿಕೋರಿನ್ - ಮೈಸೂರು ಎಕ್ಸ್ಪ್ರೆಸ್, ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್, ಮೈಲಾಡುತುರೈ-ಮೈಸೂರು ಎಕ್ಸ್ಪ್ರೆಸ್, ನಾಗರ್ಕೋಯಿಲ್ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್ಪ್ರೆಸ್, ಕೊಯಮತ್ತೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಓಡಾಡುವ ಮಾರ್ಗಗಳನ್ನು ಬದಲಿಸಲಾಗಿದೆ.
ಈ ರೈಲುಗಳು ಸೇಲಂ, ತಿರುಪತ್ತೂರ್, ಜೋಲಾರ್ಪೇಟ್ಟೈ ಎ ಕ್ಯಾಬಿನ್ ಮತ್ತು ಕೃಷ್ಣರಾಜಪುರ ಮೂಲಕ ಸಂಚರಿಸುತ್ತವೆ.
ಕೆಎಸ್ಆರ್ ಬೆಂಗಳೂರು - ಎರ್ನಾಕುಲಂ ಎಕ್ಸ್ಪ್ರೆಸ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ - ಕಾರೈಕಲ್ ಎಕ್ಸ್ಪ್ರೆಸ್ ರೈಲುಗಳು ಕೂಡ ಕೃಷ್ಣರಾಜಪುರಂ, ಜೋಲಾರ್ಪೇಟ್ಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮೂಲಕ ಸಂಚರಿಸಲಿವೆ.
ಮಾರ್ಗ ಬದಲಿಸಿದ ಎಲ್ಲಾ ರೈಲುಗಳು ಕುಪ್ಪಂ, ಬಂಗಾರಪೇಟೆ, ಮಾಲೂರು ಮತ್ತು ಕೃಷ್ಣರಾಜಪುರದಲ್ಲಿ ಒಂದು ನಿಮಿಷ ಹೆಚ್ಚುವರಿಯಾಗಿ ನಿಲುಗಡೆ ಮಾಡಲಿವೆ.
Advertisement