ಮಂಗಳೂರು: ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ವ್ಯಾಪಾರಿ ಧರ್ಮ ದಂಗಲ್ ಮತ್ತೆ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿದೆ. ಕರಾವಳಿಯಲ್ಲಿ ಜಾತ್ರೆಗಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಈ ನಡುವಲ್ಲೇ ಅಧಿಕೃತವಾಗಿ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘವೊಂದು ಹುಟ್ಟಿಕೊಳ್ಳುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮಹೇಶ್ ದಾಸ್ ಅವರು, ರಾಜ್ಯದಲ್ಲಿ 1.27 ಲಕ್ಷ ಹಿಂದೂ ಮಾರಾಟಗಾರರಿದ್ದು, ಇವರು ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕುತ್ತಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ಸ್ಥಾಪಿಸಲು ಅನುಮತಿ ನೀಡಿ ಸರ್ಕಾರ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಸ್ಟಾಲ್ಗಳನ್ನು ವಿತರಿಸಲು ಸಾರ್ವಜನಿಕ ಹರಾಜು ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉತ್ಸವ ವರ್ತಕರ ಸಮನ್ವಯ ಸಮಿತಿ, ಹಬ್ಬ-ಹರಿದಿನಗಳಲ್ಲಿ ದೇಗುಲಗಳ ಬಳ ಎಲ್ಲಾ ಧರ್ಮದ ಬಡ ವ್ಯಾಪಾರಿಗಳಿಗೆ ಜಾತಿ-ಧರ್ಮದ ಬೇಧವಿಲ್ಲದೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದೆ.
ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮತ್ತು ಬಿ ಕೆ ಇಮ್ತಿಯಾಜ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಹಬ್ಬ ಹರಿದಿನಗಳಲ್ಲಿ ಮಾರಾಟಗಾರರಿಗೆ ರಕ್ಷಣೆ ನೀಡಬೇಕು. ಧರ್ಮದ ಆಧಾರದ ಮೇಲೆ ವ್ಯಾಪಾರಿಗಳನ್ನು ನಿಷೇಧಿಸಿದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ವರ್ಷ ರಾಜ್ಯದಲ್ಲಿ ಧಾರ್ಮಿಕ ವ್ಯಾಪಾರಿ ಧರ್ಮ ದಂಗಲ್ ಭಾರೀ ವಿವಾದ ಸೃಷ್ಟಿಸಿತ್ತು. ಕರಾವಳಿಯಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ಹಬ್ಬುವ ಮೂಲಕ ಮತ್ತಷ್ಟು ಬಿಸಿಯೇರಿತ್ತು.
ದೇವಸ್ಥಾನಗಳ ಜಾತ್ರೆಯ ಹೊತ್ತಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ನಿಷೇಧ ಎನ್ನುವ ಬ್ಯಾನರ್ ಹಾಕುವ ಮೂಲಕ ಹಿಂದೂ ಸಂಘಟನೆಗಳು ವಿವಾದ ಎಬ್ಬಿಸಿದ್ದವು.
Advertisement