ಪೊಲೀಸರು, ರಾಜಕಾರಣಿಗಳ ಮನೆ ಹೆಣ್ಣು ಮಕ್ಕಳ ಮೇಲೆ ದಾಳಿಯಾದರೆ ನೋವು ಅರ್ಥವಾಗುತ್ತದೆ: ಪ್ರಮೋದ್ ಮುತಾಲಿಕ್

ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳ ಮನೆಯ ಹೆಣ್ಣು ಮಕ್ಕಳ ಅಪಹರಣ ಅಥವಾ ಅತ್ಯಾಚಾರಗಳು ನಡೆದರೆ ಸಾಮಾನ್ಯ ಜನರ ನೋವು ಅರ್ಧವಾಗುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗುರುವಾರ ಹೇಳಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ.
ಶ್ರೀರಾಮಸೇನೆ ಮುಖ್ಯಸ್ಥ.

ಹುಬ್ಬಳ್ಳಿ: ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳ ಮನೆಯ ಹೆಣ್ಣು ಮಕ್ಕಳ ಅಪಹರಣ ಅಥವಾ ಅತ್ಯಾಚಾರಗಳು ನಡೆದರೆ ಸಾಮಾನ್ಯ ಜನರ ನೋವು ಅರ್ಧವಾಗುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರದಲ್ಲಿ ಎರಡು ಆಘಾತಕಾರಿ ಸುದ್ದಿಗಳು ಪ್ರಕಟವಾಗಿವೆ. ರಾಜ್ಯದಲ್ಲಿ 3 ವರ್ಷಗಳಲ್ಲಿ 18-30 ವರ್ಷ ವಯಸ್ಸಿನ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. 45 ಸಾವಿಪ ಅಪ್ರಾಪ್ತ ಯುವತಿಯರು ಗರ್ಭಿಣಿಯಾಗಿದ್ದಾರೆ. ದೇಶದಲ್ಲಿ 13 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ. ಈ ವಿಷಯ ಸರ್ಕಾರ, ಸಮಾಜ, ಸಂಘಟನೆಗಳು ಗಂಭೀರವಾಗಿ ಪರಿಗಣಿಸಲಿ. ಕಾಣೆಯಾದವುಗಳಲ್ಲಿ ಲವ್ ಜಿಹಾದ್ ಪ್ರಕರಣಗಳಿವೆ. ಈ ಕುರಿತು ತನಿಖೆಯಾಗಬೇಕಿದೆ. ಸರ್ಕಾರ ಈ ಕೂಡಲೇ ವಿಶೇಷ ಮಹಿಳಾ ಪಡೆ ರಚಿಸುವ ಮೂಲಕ ಇಂತಹ ಪ್ರಕರಣಗಳಿಗೆ ಮುಕ್ತಿ ಹಾಡಬೇಕಿದೆ ಎಂದು ಹೇಳಿದರು.

ಮಹಿಳಾ ಭದ್ರತೆ ಪ್ರಮುಖ ವಿಷಯವಾದರೂ ಸರಕಾರ ಅದನ್ನು ಲಘುವಾಗಿ ಪರಿಗಣಿಸಿದೆ. ಪೊಲೀಸರ ನಿರ್ಲಕ್ಷ್ಯ ಧೋರಣೆಯಿಂದಾಗಿ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರ ಉದಾಸೀನ ಧೋರಣೆಯೇ ರಾಜ್ಯದಲ್ಲಿ ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಮೂಡಿಸಿದ್ದು, ಇಡೀ ಪೊಲೀಸ್ ವ್ಯವಸ್ಥೆಯೇ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತನಿಖಾ ಸಂಸ್ಥೆಗಳು, ಅಧಿಕಾರಿಗಳು ಮತ್ತು ಪ್ರಾಸಿಕ್ಯೂಷನ್ ಹೇಗೆ ತಪ್ಪಾಗಿ ನಿರ್ವಹಿಸಿದೆ ಎಂಬುದನ್ನು ವಿವರಿಸಿದರು.

ಸೌಜನ್ಯ ಮಾದರಿಯಲ್ಲಿ 2010 ರಲ್ಲಿ ಮುರುಡೇಶ್ವರದಲ್ಲಿ ಯಮುನಾ ನಾಯಕ್ ಎನ್ನುವ ಹುಡುಗಿ ಕೊಲೆಯಾಗಿತ್ತು. ಮುಸ್ಲಿಂ ಮನೆಗೆ ಕೆಲಸಕ್ಕೆ ಹೋಗೋ ಹುಡಗಿಯನ್ನ ಕೊಲೆ ಮಾಡಲಾಗಿತ್ತು. ಈ ಕೇಸ್ ನಲ್ಲಿ ಯಾವುದೇ ಕುರುಹು ಇಲ್ಲ ಎಂದು ಆರೋಪಿ ನಿರ್ದೋಷಿಯಾದ. ಸೌಜನ್ಯದು ಕೂಡಾ ರೇಪ್ ಮರ್ಡರ್ ಕೇಸ್ ಆಗಿತ್ತು. ಅಮಾಯಕ ವ್ಯಕ್ತಿ ಸಂತೋಷ್ ನನ್ನು ಬಂಧನಕ್ಕೊಳಪಡಿಸಿದ್ದರು. ನಂತರ ಬಿಡುಗಡೆ ಮಾಡಿದ್ದರು.. ಸಂತೋಷ್ ಬಂಧನಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಬಿಡುಗಡೆ ಮಾಡಿದ್ದರು. ನಂತರ ಇದುವರೆಗೂ ಯಾವುದೇ ತನಿಖೆಯಾಗಿಲ್ಲ. ನಿರ್ಲಜ್ಜ ಪೊಲೀಸ್ ವ್ಯವಸ್ಥೆಗೆ ಇದು ಕಾರಣ. ವೆಂಕಟೇಶ, ಸಂತೋಷ್ ಪೊಲೀಸರ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿದ್ದರೂ ಸರ್ಕಾರ ಯಾವುದೇ ಉಪಕ್ರಮ ಕೈಗೊಂಡಿಲ್ಲ. ತಮ್ಮ ಕುಟುಂಬದ ಹೆಣ್ಣುಮಕ್ಕಳು ಅಥವಾ ಮಹಿಳೆಯರನ್ನು ಅಪಹರಿಸಿದರೆ ಅಥವಾ ಅತ್ಯಾಚಾರವೆಸಗಿದರೆ ಮಾತ್ರವೇ ಪೊಲೀಸ್ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ನೋವು ಅರ್ಥವಾಗುತ್ತದೆ ಎಂದು ಕಿಡಿಕಾರಿದರು.

ಇದೇ ವೇಳೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಮಹಿಳೆಯರ ನಾಪತ್ತೆ ಮತ್ತು ಅಪ್ರಾಪ್ತರ ಗರ್ಭಪಾತದ ವರದಿಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಅಲ್ಲದೆ, ಪ್ರಕರಣದಲ್ಲಿ ಬಂಧಿತರಾಗಿದ್ದ ಸಂತೋಷ್ ರಾವ್ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಧನಸಹಾಯ ಹಾಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಸೌಜನ್ಯ ಪ್ರಕರಣವನ್ನು ಮರು ತೆರೆಯಲು ಸರ್ಕಾರ ಆದೇಶ ನೀಡದಿದ್ದರೆ, ಶ್ರೀರಾಮ ಸೇನೆ ಮತ್ತು ಇತರ ಹಿಂದೂ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕದಲ್ಲಿ ಇದೇ ತಿಂಗಳ ಕೊನೆಯ ವಾರದಲ್ಲಿ ಹುಬ್ಬಳ್ಳಿಯಿಂದ ಪ್ರತಿಭಟನೆ ಆರಂಭಿಸಲಾಗುವುದು. ಈ ಪ್ರತಿಭಟನೆಯಲ್ಲಿ ಸೌಜನ್ಯ ಅವರ ತಾಯಿ ಮತ್ತು ತಂದೆ ಮಹೇಶ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com