ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್ಪಿಕೆಎಲ್) ಹಾದು ಹೋಗುವ ಮುಖ್ಯ ರಸ್ತೆ (ಎಂಎಆರ್) ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ 15 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಳ್ಳುವ ವೇಳೆ, ಭಾರೀ ಹೈಡ್ರಾಮಾ ನಡೆಯಿತು.
ಅದು ಬಿಡಿಎ ಸ್ವಾಧೀನಪಡಿಸಿಕೊಳ್ಳಲು ಸೂಚಿಸಿರುವ ಭೂಮಿಯಾಗಿತ್ತು. ಇದಕ್ಕಾಗಿ ಬಿಡಿಎಯ ವಿಶೇಷ ಕಾರ್ಯಪಡೆ, ಎಂಜಿನಿಯರ್ಗಳು, ಭೂಸ್ವಾಧೀನ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಬುಲ್ಡೋಜರ್ಗಳಿಂದ ಭೂಮಿಯಲ್ಲಿರುವ ನಿರ್ಮಾಣಗಳು ಹಾಗೂ ಬೇಲಿಗಳನ್ನು ನೆಲಸಮಗೊಳಿಸಬೇಕಾಗಿತ್ತು.
ಬೆಳಿಗ್ಗೆ 9 ಗಂಟೆಗೆ ಕಾರ್ಯಾಚರಣ ಆರಂಭವಾಗಬೇಕಿತ್ತು. ಆದರೆ, 10 ಕುಟುಂಬಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಬಳಿಕ ಬಲವಂತದಿಂದ ಭೂಮಿ ವಶಪಡಿಸಿಕೊಳ್ಳಬೇಕಾಯಿತು. ಅಂತಿಮವಾಗಿ ಸಂಜೆ 5 ಗಂಟೆಗೆ ಕಾರ್ಯಾಚರಣೆ ಪೂರ್ಣಗೊಂಡಿತು ಎಂದು ಬಿಡಿಎ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಭೂ ಮಾಲೀಕರಿಗೆ ಪರ್ಯಾಯ ಭೂಮಿ ರೂಪದಲ್ಲಿ ಪರಿಹಾರವನ್ನು ನೀಡಲಾಗಿದೆ. ಆದರೂ, ಮಾಲೀಕರು ಭೂಮಿ ನೀಡಲು ನಿರಾಕರಿಸಿದ್ದರು. ತಮ್ಮ ಹೆಸರಿಗೆ ಮಂಜೂರಾದ ಭೂಮಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬುದು ಅವರ ವಾದವಾಗಿತ್ತು ಎಂದು ತಿಳಿಸಿದ್ದಾರೆ.
ರಸ್ತೆಯು 10.77 ಕಿ.ಮೀವರೆಗೆ ಸಾಗುತ್ತದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಇದು ಸಂಪರ್ಕಿಸುತ್ತದೆ, ಈಹಾಹವೇ 7.71 ಕಿಮೀ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಈ ಪೈಕಿ 2 ಕಿ,ಮೀ ಕಾರ್ಯ ಪೂರ್ಣಗೊಂಡಿದೆ. ಆದರೆ, ರಸ್ತೆಯನ್ನು ಇನ್ನೂ ಬಳಕೆ ಮಾಡುತ್ತಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೆಂಪೇಗೌಡ ಬಡಾವಣೆ ನಿರ್ಮಾಣ ಕಾಮಗಾರಿಯನ್ನು ಪಪರಿಶೀಲನೆ ನಡೆಸಿದ್ದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
Advertisement