ಶಕ್ತಿ ಯೋಜನೆ ವಿರೋಧಿಸಿ ಕರ್ನಾಟಕ ಬಂದ್: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದಿಂದ ಸಿಎಂ ನೇತೃತ್ವದ ಸಭೆ ಬಹಿಷ್ಕಾರ!
ಬೆಂಗಳೂರು: ‘ಶಕ್ತಿ’ ಯೋಜನೆ ಜಾರಿ ಬಳಿಕ ಸಂಕಷ್ಟಕ್ಕೆ ಸಿಲುಕಿಕೊಂಡದ್ದು, ರಾಜ್ಯ ಸರ್ಕಾರಕ್ಕೆ ನಷ್ಟ ಭರಿಸುವಂತೆ ಒತ್ತಾಯಿಸುತ್ತಿರುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯನ್ನು ಬಹಿಷ್ಕರಿಸಿವೆ.
ಶಕ್ತಿ ಯೋಜನೆ ಜಾರಿ ಆದ ನಂತರ ಖಾಸಗಿ ಸಾರಿಗೆ ಉದ್ಯಮಕ್ಕೆ ಎದುರಾದ ಸಂಕಷ್ಟಗಳ ಕುರಿತಂತೆ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದರ ಗಂಭೀರತೆ ಅರಿತ ಸಚಿವ ರಾಮಲಿಂಗಾರೆಡ್ಡಿ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಸೋಮವಾರ ಸಿಎಂ ಸಿದ್ದರಾಮಯ್ಯ ನೇತತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ, ಈ ಸಭೆಯನ್ನು ಹಲವು ಸಂಘಟನೆಗಳು ಬಹಿಷ್ಕರಿಸಿವೆ.
ಹೆಚ್ಚುವರಿ ಸಾರಿಗೆ ಆಯುಕ್ತ ಹೇಮಂತ್ ಕುಮಾರ್ ಅವರು ಸಭೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಫೆಡರೇಶನ್ನ ಭಾಗವಾಗಿರುವ ಕೆಲವು ಸಂಘಗಳ ಹೆಸರನ್ನು ಕೈಬಿಟ್ಟಿದ್ದು, ಬೆಂಗಳೂರು ಬಂದ್ಗೆ ಕರೆ ನೀಡದ ಸಂಘಗಳನ್ನು ಸೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ವರ್ತನೆ ಒಕ್ಕೂಟದ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ‘ಶಕ್ತಿ’ ಯೋಜನೆ ಜಾರಿಯಾದ ನಂತರ ಖಾಸಗಿ ಸಾರಿಗೆ ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯೋಜಿತ ಪ್ರತಿಭಟನೆಯನ್ನು ತಡೆ ಹಿಡಿದಿದ್ದೆವು. ಆದರೆ, ಹೋರಾಟಕ್ಕೆ ಬೆಂಬಲ ಸೂಚಿಸದ ಸಂಘಟನೆಗಳನ್ನು ಸಭೆಗೆ ಕರೆಯಲಾಗಿದೆ. ಸಾರಿಗೆ ಅಡಿಷನಲ್ ಕಮೀಷನರ್, ಹೇಮಂತ್ ಕುಮಾರ್ ಸಂಘಗಳನ್ನು ಒಡೆಯೋ ಕೆಲಸ ಮಾಡುತ್ತಾರೆ. ಹೇಮಂತ್ ಕುಮಾರ್ ವರ್ಗಾವಣೆಗೆ ಕಮಿಷನರ್ಗೆ ಮನವಿ ಮಾಡಿದ್ದೇವೆಂದು ಹೇಳಿದರು.
ಸಿಎಂ ಸಭೆಗೆ 32 ಸಂಘಟನೆಗಳು ಬಹಿಷ್ಕರಿಸಿದ್ದೇವೆ. ಸಿಎಂ ಸಭೆಯನ್ನು ತುಚ್ಚವಾಗಿ ನೋಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನ ಕಾಲಾವಕಾಶವಿದ್ದು, ಅಷ್ಟರೊಳಗೆ ಮತ್ತೆ ಎಲ್ಲಾ ಸಂಘಟನೆಗಳು ಸೇರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ. ಸೆಪ್ಟೆಂಬರ್ 1 ರಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ