ಮೈಸೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಮಹಿಳೆಯರಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿವೆ. ಆದರೆ, ಯೋಜನೆಯು ಅಂತರ್ ರಾಜ್ಯ ಕೆಎಸ್ಆರ್ಟಿಸಿ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.
ಯೋಜನೆ ಜಾರಿಯಾದ ಬಳಿಕ ಅಂತರ್ ರಾಜ್ಯ ಬಸ್ ಗಳ ಸೇವೆಯನ್ನು ಕಡಿತಗೊಳಿಸಲಾಗುತ್ತಿದ್ದು, ಇದು ಪ್ರವಾಸಿಗರು ಹಾಗೂ ಇತರೆ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡುತ್ತಿದೆ.
ಗುಂಡ್ಲುಪೇಟೆಯಿಂದ ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಕೆಎಸ್ಆರ್ಟಿಸಿ ಅಂತರರಾಜ್ಯ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಈ ರಾಜ್ಯಗಳಿಗೆ ತೆರಳುತ್ತಿದ್ದ ಬಸ್ ಗಳ ಸಂಖ್ಯೆ 11ರಿಂದ 1ಕ್ಕೆ ಇಳಿಕೆಯಾಗಿದೆ.
ಗುಂಡ್ಲುಪೇಟೆ-ಕೋಯಿಕ್ಕೋಡ್ ನಡುವೆ ಸಂಚರಿಸುವ ಎರಡು ಬಸ್ಗಳು, ಗುಂಡ್ಲುಪೇಟೆ-ಊಟಿಗೆ ಎರಡು ಬಸ್ ಮತ್ತು ಗುಂಡ್ಲುಪೇಟೆ-ಕೊಯಮತ್ತೂರಿಗೆ ತೆರಳುತ್ತಿದ್ದ ಮೂರು ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡಿನ ಗುಂಡ್ಲುಪೇಟೆ-ಕಲ್ಪೆಟ್ಟಾ ನಡುವೆ ಸಂಚರಿಸುತ್ತಿದ್ದ ಎರಡು ಬಸ್ ಗಳ ಪೈಕಿ, ಒಂದು ಬಸ್ಸಿನ ಸಂಚಾರವನ್ನು ಯೋಜನೆ ಬಳಿಕ ಸ್ಥಗಿತಗೊಳಿಸಲಾಗಿದೆ.
ಬಸ್ ಗಳ ಸಂಖ್ಯೆ ಕಡಿತಗೊಂಡಿರುವ ಪರಿಣಾಮ ಖಾಸಗಿ ಬಸ್, ಕಾರು ಮತ್ತು ಟ್ರಕ್ ಗಳ ಮೇಲೆ ಜನರು ಅವಲಂಬಿತರಾಗುವಂತೆ ಮಾಡಿದೆ.
Advertisement