ಗದಗ: ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದೀಗ ಉಳಿದಿರುವ ಅಲ್ಪಸ್ವಲ್ಪ ಬೆಳೆಗಳ ಉಳಿಸಲು ಲಕ್ಷ್ಮೇಶ್ವರ ಹಾಗೂ ಗದಗ ಭಾಗದ ರೈತರು ನೀರಿನ ಟ್ಯಾಂಕರ್ ಹಾಗೂ ರಸ್ತೆಯಲ್ಲಿ ನಿಂತ ನೀರನ್ನು ಬಳಕೆ ಮಾಡುತ್ತಿದ್ದಾರೆ.
ಈ ಭಾಗದ ರೈತರು ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನಕಾಯಿ, ಹಸಿಮೆಣಸಿನ ಬೆಳೆಗಳನ್ನು ಬಿತ್ತನೆ ಮಾಡಿದ್ದು, ತಿಂಗಳಿನಿಂದ ಮಳೆ ಬಾರದೇ ಇರುವುದರಿಂದ ಬೆಳೆಗಳಿಗೆ ನೀರಿನ ಅಭಾವತೆ ಎದುರಾಗಿದೆ. ಇದರಿಂದ ಬೆಳೆಗಳು ಒಣಗುವ ಹಂತಕ್ಕೆ ಸಾಗಿದೆ.
ಹೀಗಾಗಿ ಹಣವುಳ್ಳ ರೈತರು ನೀರಿನ ಟ್ಯಾಂಕರ್ ಗಳ ಖರೀದಿಸಿ, ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಸಾಧ್ಯವಾಗದವರು ಪಂಪ್ ಸೆಟ್ ಗಳ ಬಳಸಿ ನಾಲೆಗಳಿಂದ ನೀರನ್ನು ಬಳಸುತ್ತಿದ್ದಾರೆ.
ಬಳಕೆ ಮಾಡಿದ ನೀರು ಲಕ್ಷ್ಮೇಶ್ವರದಿಂದ ದೊಡ್ಡ ಚರಂಡಿಯ ಮೂಲಕ ಪಟ್ಟಣದ ಹೊರವಲಯದ ಕಡೆಗೆ ಹರಿದು ಹೋಗುತ್ತದೆ. ಅನೇಕ ರೈತರು ಪಂಪ್ ಸೆಟ್ ಗಳ ಮೂಲಕ ಈ ನೀರನ್ನು ಸೆಳೆದು ತಮ್ಮ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇದಲ್ಲದೆ, ಕೆರೆ ಬಳಿ ನಿಂತ ನೀರನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀರಿನ ಟ್ಯಾಂಕರ್ಗಳು ದುಬಾರಿಯಾಗಿವೆ, ಬೆಳೆಗಳಿಗೆ ನೀರು ಸರಬರಾಜು ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕು. ಒಂದು ಎಕರೆ ಭೂಮಿಯ ಬೆಳೆಗೆ ಸುಮಾರು 4,000 ರೂಪಾಯಿ ಖರ್ಚು ಮಾಡಬೇಕಾಗಿದ್ದು, ಇದು ಆರ್ಥಿಕವಾಗಿ ಸಂಕಷ್ಟವನ್ನು ಎದುರು ಮಾಡಲಿದೆ. ಹೀಗಾಗಿ ಕೆಲವು ಶ್ರೀಮಂತ ರೈತರು ಮಾತ್ರ ಈ ಆಯ್ಕೆಯನ್ನು ಬಳಕೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಗದಗ ಸೇರಿದಂತೆ ಕೆಲವೆಡೆ ಮಳೆಯಾಗಿದ್ದರೂ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಕೆಲವೆಡೆ ಮಳೆಯಾಗಿಲ್ಲ. ಇದು ರೈತರನ್ನು ಹತಾಶೆಗೊಳಗಾಗುವಂತೆ ಮಾಡಿದೆ. ಇದರಿಂದೀಗೆ ಇತರೆ ನೀರಿನ ಮೂಲಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರೈತರೊಬ್ಬರು ಹೇಳಿದ್ದಾರೆ.
ಟ್ಯಾಂಕರ್ ಗಳಿಗೆ ಬೇಡಿಕೆಗಳು ಹೆಚ್ಚಾಗುತ್ತಿರುವುದರಿಂದ ಟ್ಯಾಂಕರ್ ಮಾಲೀಕರೂ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಪ್ರತೀ ನೀರಿನ ಲೋಡ್'ಗೆ 400-500 ರೂ. ಏರಿಕೆ ಮಾಡಿದ್ದಾರೆ. ಹೊಲಗಳು ಪಟ್ಟಣದಿಂದ ದೂರದಲ್ಲಿದ್ದರೆ, ಟ್ಯಾಂಕರ್ ಮಾಲೀಕರು ಹೆಚ್ಚಿನ ಶುಲ್ಕ ವಿಧಿಸುತ್ತಾರೆ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಕಳೆದ 30 ದಿನಗಳಿಂದ ಮಳೆ ಬಾರದೆ, ಕೆರೆ, ನಾಲೆಗಳ ಮೂಲಕ ನೀರು ಪಡೆಯಲು ಹರಸಾಹಸ ಪಡುತ್ತಿದ್ದೇವೆ. ಕೆಲವು ರೈತರು ನಿಂತಿರುವ ನೀರಿನ ಮೂಲಗಳಿಂದಲೂ ನೀರನ್ನು ಎತ್ತುತ್ತಿದ್ದಾರೆ. ಈ ಹಿಂದೆ ಇಂತಹ ಪರಿಸ್ಥಿತಿಯನ್ನು ಎಂದಿಗೂ ನೋಡಿರಲಿಲ್ಲ. ಟ್ಯಾಂಕರ್ ಮಾಲೀಕರೂ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಲಕ್ಷ್ಮೇಶ್ವರದ ರೈತ ಶರಣು ಗೌಡರ್ ತಿಳಿಸಿದ್ದಾರೆ.
ಗದಗ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ‘ಲಕ್ಷ್ಮೇಶ್ವರ ಹಾಗೂ ಕೆಲ ಭಾಗದ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಮ್ಮ ಅಧಿಕಾರಿಗಳು ಕೆಲವು ಜಮೀನುಗಳಿಗೆ ಭೇಟಿ ನೀಡಿ, ಕೃಷಿಯಲ್ಲಿ ತುಂತುರು ಅಥವಾ ಹನಿ ನೀರಾವರಿ ವಿಧಾನಗಳನ್ನು ಬಳಸಲು ರೈತರಿಗೆ ಸಲಹೆ ನೀಡಿದ್ದಾರೆ. ಸಹಾಯಕ್ಕಾಗಿ ರೈತರು ತಮ್ಮ ಹತ್ತಿರದ ಕೃಷಿ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
Advertisement