ತಾಯಂದಿರಿಗೆ ಸಿಹಿಸುದ್ದಿ: ಬೆಂಗಳೂರು ವಿಭಾಗದ ಎಂಟು ರೈಲ್ವೆ ನಿಲ್ದಾಣಗಳಲ್ಲಿ ಶಿಶು ಆಹಾರ ಕೊಠಡಿಗಳ ಸ್ಥಾಪನೆ

ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳ ಮೂಲಕ ಪ್ರಯಾಣಿಸುವ ಯುವ ತಾಯಂದಿರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಅವರು ಇನ್ಮುಂದೆ ತಮ್ಮ ಶಿಶುಗಳಿಗೆ ಖಾಸಗಿಯಾಗಿ ಮತ್ತು ಕಂಫರ್ಟ್ ಆಗಿ ಆಹಾರ ನೀಡಬಹುದಾಗಿದೆ.
ಶಿಶು ಆಹಾರ ಕೊಠಡಿ (ಪ್ರಾತಿನಿಧಿಕ ಚಿತ್ರ)
ಶಿಶು ಆಹಾರ ಕೊಠಡಿ (ಪ್ರಾತಿನಿಧಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳ ಮೂಲಕ ಪ್ರಯಾಣಿಸುವ ಯುವ ತಾಯಂದಿರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಅವರು ಇನ್ಮುಂದೆ ತಮ್ಮ ಶಿಶುಗಳಿಗೆ ಖಾಸಗಿಯಾಗಿ ಮತ್ತು ಕಂಫರ್ಟ್ ಆಗಿ ಆಹಾರ ನೀಡಬಹುದಾಗಿದೆ. ಮೆತ್ತನೆಯ ಸೀಟುಗಳು ಮತ್ತು ಡೈಪರ್ ಬದಲಾಯಿಸುವ ಘಟಕಗಳೊಂದಿಗೆ ಸುಸಜ್ಜಿತವಾದ ಎಂಟು ಆಧುನಿಕ ಶಿಶು ಆಹಾರ ಕೊಠಡಿಗಳು ಐದು ಪ್ರಮುಖ ನಿಲ್ದಾಣಗಳಲ್ಲಿ ನಿರ್ಮಾಣವಾಗಲಿವೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅವುಗಳನ್ನು ಸ್ಥಾಪಿಸುವ ಗುತ್ತಿಗೆಯನ್ನು ಬುಲ್ಸ್ ಐ ಮೀಡಿಯಾಗೆ ಮುಕ್ತ ಆನ್‌ಲೈನ್ ಹರಾಜಿನ ಮೂಲಕ ನೀಡಲಾಗಿದೆ.

ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (ಎಸ್‌ಆರ್‌ಡಿಸಿಎಂ) ಕೃಷ್ಣ ಚೈತನ್ಯ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, 'ಈ ಹಿಂದೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ತೆರೆಯಲಾದ ಶಿಶು ಆಹಾರ ಕೇಂದ್ರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ವಿಭಾಗದಲ್ಲಿ ಕೆಎಸ್‌ಆರ್ ಬೆಂಗಳೂರು ನಗರ ನಿಲ್ದಾಣದಲ್ಲಿ ನಾಲ್ಕು ಶಿಶು ಆಹಾರ ಕೊಠಡಿಗಳು ಇರುತ್ತವೆ. ಈ ಪೈಕಿ ಒಂದನ್ನು ಲೇಡೀಸ್ ವೇಟಿಂಗ್ ಹಾಲ್ ಬಳಿ ಮತ್ತು 2/3, 5/6 ಮತ್ತು 7/8 ಸಂಯೋಜಿತ ಪ್ಲಾಟ್‌ಫಾರ್ಮ್‌ಗಳಲ್ಲಿ ತಲಾ ಒಂದನ್ನು ತೆರೆಯಲಾಗುವುದು. ಯಶವಂತಪುರ, ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ), ಕಂಟೋನ್ಮೆಂಟ್ ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ಕೂಡ ತಲಾ ಒಂದು ಕೊಠಡಿಯನ್ನು ನಿರ್ಮಿಸಲಾಗುತ್ತದೆ. ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿರುವ ಫೀಡಿಂಗ್ ಕ್ಯುಬಿಕಲ್‌ಗಳಿಗೆ ಇವು ಸೇರ್ಪಡೆಯಾಗಲಿವೆ' ಎಂದು ತಿಳಿಸಿದರು.

'ಒಪ್ಪಂದದ ಪ್ರಕಾರ, ಪರವಾನಗಿದಾರರು ಶಿಶು ಆಹಾರ ಕೊಠಡಿಗಳನ್ನು ಸ್ಥಾಪಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ಆದರೆ, ರೈಲ್ವೆಯು ಈ ಕೊಠಡಿಗಳಲ್ಲಿನ ಜಾಹೀರಾತು ಹಕ್ಕುಗಳನ್ನು ಪರವಾನಗಿದಾರರಿಗೇ ನೀಡುತ್ತದೆ. ಒಪ್ಪಂದವು ಮೂರು ವರ್ಷಗಳ ಅವಧಿಗೆ ಇರುತ್ತದೆ' ಎಂದು ಚೈತನ್ಯ ಹೇಳಿದರು.

ಖಾಸಗಿ ಪಾಲುದಾರರು ಬೆಂಗಳೂರಿನಲ್ಲಿರುವ ಎಲ್ಲಾ ಎಂಟು ಘಟಕಗಳಿಗೆ ಭಾರತೀಯ ರೈಲ್ವೆಗೆ ವಾರ್ಷಿಕ 5.35 ಲಕ್ಷ ರೂ. ಶುಲ್ಕವನ್ನು ಪಾವತಿಸಬೇಕು. ಇದು ಕೂಡ ರೈಲ್ವೆ ವಿಭಾಗ ಕೈಗೊಂಡ ಆದಾಯ ರಹಿತ ಕ್ರಮಗಳಲ್ಲಿ ಒಂದಾಗಿದೆ. ಶಿಶು ಆಹಾರ ಕೇಂದ್ರಗಳನ್ನು ಪ್ರಮುಖ ಆದಾಯದ ಹರಿವಿಗಿಂತ ಹೆಚ್ಚಾಗಿ ಪ್ರಮುಖ ಸಾರ್ವಜನಿಕ ಸೌಕರ್ಯವಾಗಿ ನೋಡಲಾಗುತ್ತಿದೆ ಎಂದು ಎಸ್‌ಆರ್‌ಡಿಸಿಎಂ ವಿವರಿಸಿದೆ. ಸಾರ್ವಜನಿಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ, ಭವಿಷ್ಯದಲ್ಲಿ ವಿಭಾಗದ ಇತರ ನಿಲ್ದಾಣಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು' ಎಂದು ಅವರು ಹೇಳಿದರು.

ಕೆಎಸ್‌ಆರ್ ಬೆಂಗಳೂರು, ಯಲಹಂಕ, ವೈಟ್‌ಫೀಲ್ಡ್, ಕೆಆರ್ ಪುರಂ, ತುಮಕೂರು, ಯಶವಂತಪುರ ಮತ್ತು ಎಸ್‌ಎಂವಿಟಿ ಸ್ಟೇಷನ್‌ಗಳಲ್ಲಿ ಮಸಾಜ್ ಕುರ್ಚಿಗಳೊಂದಿಗೆ ವಿಶ್ರಾಂತಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಇದರೊಂದಿಗೆ, ಕೆಎಸ್ಆರ್  ಬೆಂಗಳೂರು, ಯಶವಂತಪುರ ಮತ್ತು ಎಸ್‌ಎಂವಿಟಿ ನಿಲ್ದಾಣಗಳಲ್ಲಿ ಬೆಲೆಬಾಳುವ ವಸ್ತುಗಳು ಮತ್ತು ಲಗೇಜ್‌ ಅನ್ನು ಸಂಗ್ರಹಿಸಲು QR ಕೋಡ್ ಸ್ಕ್ಯಾನರ್‌ಗಳೊಂದಿಗೆ ಸ್ವಯಂ-ಚಾಲಿತ ಡಿಜಿಟಲ್ ಲಾಕರ್‌ಗಳ ಹೈಟೆಕ್ ಶೇಖರಣಾ ಸೌಲಭ್ಯ ಪ್ರಾರಂಭವಾಗುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com