ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕಂಪನವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ,
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.1 ಎಂದು ಅಳೆಯಲಾಗಿದೆ. ಭೂಕಂಪದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಭೂಮಿ ನಡುಗುತ್ತಿದ್ದಂತೆಯೇ ಆತಂಕಗೊಂಡ ಜನತೆ ಮನೆಗೆ ಹಾಗೂ ತಾವಿದ್ದ ಸ್ಥಳದಿಂದ ಓಡಲು ಆರಂಭಿಸಿದ್ದರು.
ಇತ್ತೀಚೆಗೆ ಕೆಲ ದಿನಗಳಿಂದ ವಿಜಯನಗರ ಹಾಗೂ ಕಲಬುರಗಿ ಸುತ್ತಮುತ್ತ ಆಗಾಗ ಭೂಕಂಪನದ ಅನುಭವವಾಗುತ್ತಲೇ ಇದೆ. ಅದೃಷ್ಟವಶಾತ್ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ನ್ನು ಮೀರಿ ಹೋಗಿಲ್ಲ.
ಇದನ್ನೂ ಓದಿ: ಮಳೆಯ ಮಧ್ಯೆ ವಿಜಯಪುರದಲ್ಲಿ ಭೂಕಂಪನ: ಆತಂಕದಲ್ಲಿ ಜನತೆ
ಕಳೆದ ವರ್ಷ ಹತ್ತಕ್ಕೂ ಹೆಚ್ಚು ಬಾರಿ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿದ್ದವು.. ತಜ್ಞರು, ದಕ್ಖನ್ ಪ್ರಸ್ಥಭೂಮಿಯ ಈ ಪ್ರದೇಶ ಅಸ್ಥಿರ ಭೂಫಲಕಗಳ ಮೇಲೆ ನಿಂತಿರುವುದರಿಂದ ಭೂಕಂಪನದ ಸಾಧ್ಯತೆಗಳು ಹೆಚ್ಚು ಇವೆ ಎಂದು ಹೇಳಿದ್ದಾರೆ.
ಕರ್ನಾಟಕವಷ್ಟೇ ಅಲ್ಲದೆ, ನೆರೆ ರಾಜ್ಯ ತಮಿಳುನಾಡಿನಲ್ಲೂ ಇಂದು ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಬೆಳಗ್ಗೆ 7:39ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement