ಬೆಂಗಳೂರು: ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತಿದೆ, ಶೀಘ್ರದಲ್ಲೇ ಸ್ಪೋರ್ಟ್ಸ್ ಹಬ್ ಆಫ್ ಇಂಡಿಯಾ ಎನಿಸಲಿದೆ ಎಂದು ಕೇಂದ್ರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಹೇಳಿದರು.
ಬೆಂಗಳೂರಿನಲ್ಲಿರುವ ಸಾಯ್ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ರೂ.26.77 ಕೋಟಿ ವೆಚ್ಚದ ಪುರುಷರ ವಸತಿ ನಿಲಯ ಕಟ್ಟಡ, ರೂ.28.72 ಕೋಟಿ ವೆಚ್ಚದ ಮಹಿಳಾ ವಸತಿ ನಿಲಯ ಕಟ್ಟಡ ಹಾಗೂ ರೂ.3.82 ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟಿಸಿ ನಂತರ ನಡೆದ ಮೈ ಭಾರತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಇದು ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸಹ ಹೊಂದಿದೆ, ಕ್ರೀಡಾಪಟುಗಳ ಕಾರ್ಯಕ್ಷಮತೆಯ ಮೌಲ್ಯಮಾಪನ, ಚೇತರಿಕೆ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸಮಗ್ರ ನೆರವು ನೀಡುತ್ತದೆ. ಖೇಲೋ ಇಂಡಿಯಾ ಯೋಜನೆಯಡಿ ಗುರುತಿಸಲ್ಪಟ್ಟ ಉದಯೋನ್ಮುಖ ಪ್ರತಿಭೆಗಳು ತಮ್ಮ ಹಿರಿಯರಿಂದ ಅಮೂಲ್ಯವಾದ ಅನುಭವ ಪಡೆಯುವುದರೊಂದಿಗೆ ಇಲ್ಲಿರುವ ಸೌಲಭ್ಯಗಳ ಮೂಲಕ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದ್ದು, ಹೆಮ್ಮೆಯ ಕ್ಷಣವಾಗಿದೆ. 300 ಹಾಸಿಗೆಯ ಪುರುಷರ ಹಾಸ್ಟೆಲ್ ಮತ್ತು 8 ಲೇನ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಉದ್ಘಾಟಿಸಿದ್ದೇನೆ. ಇವೆರಡನ್ನೂ ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿಯಾಗಿ 330 ಹಾಸಿಗೆಗಳ ಮಹಿಳಾ ಹಾಸ್ಟೆಲ್ ಅನ್ನು ಅನಾವರಣಗೊಳಿಸಲಾಗಿದೆ. ಒಟ್ಟು ರೂ.69.35 ಕೋಟಿ ವೆಚ್ಚದಲ್ಲಿ ಈ ಸೌಲಭ್ಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಇಂದು ಉದ್ಘಾಟಿಸಿದ ಹೊಸ ಸೌಲಭ್ಯಗಳ ಸೇರ್ಪಡೆಯಿಂದಾಗಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತರಬೇತಿ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ವೃದ್ಧಿಸುತ್ತದೆ, ಅಥ್ಲೆಟಿಕ್ಸ್, ಹಾಕಿ, ಪ್ಯಾರಾ - ಕ್ರೀಡೆಗಳಿಗೆ ಪ್ರಮುಖ ಕೇಂದ್ರವಾಗಿದೆ ಮತ್ತು ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳ ತರಬೇತಿ ಮೈದಾನವಾಗಿದೆ ಎಂದು ಹೇಳಿದರು.
Advertisement