ಡ್ರಗ್ಸ್ ಸೇವನೆ: ಮಾಜಿ ಪ್ರೇಯಸಿ ವಿಡಿಯೋ ಲೀಕ್ ಮಾಡಿದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ

ಮಾಜಿ ಪ್ರೇಯಸಿಯ ಮಾದಕ ದ್ರವ್ಯ ಸೇವನೆ ಕುರಿತ ವಿಡಿಯೋವೊಂದನ್ನು ಕ್ರಿಕೆಟಿಗ ಕೆಸಿ ಕಾರಿಯಪ್ಪ ಅವರು ಬಿಡುಗಡೆ ಮಾಡಿದ್ದು, ಈ ಕುರಿತು ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.
ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ
ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ

ಬೆಂಗಳೂರು: ಮಾಜಿ ಪ್ರೇಯಸಿಯ ಮಾದಕ ದ್ರವ್ಯ ಸೇವನೆ ಕುರಿತ ವಿಡಿಯೋವೊಂದನ್ನು ಕ್ರಿಕೆಟಿಗ ಕೆಸಿ ಕಾರಿಯಪ್ಪ ಅವರು ಬಿಡುಗಡೆ ಮಾಡಿದ್ದು, ಈ ಕುರಿತು ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಪರಸ್ಪರ ಒಬ್ಬರ ಮೇಲೊಬ್ಬರು ಮಾದಕ ಪದಾರ್ಥ ಸೇವನೆಯ ಆರೋಪ ಹೊರಿಸಿರುವುದು ಹಾಗೂ ಮಾಜಿ ಪ್ರೇಯಸಿ ಮಾದಕ ಸೇವಿಸುತ್ತಿರುವ ವಿಡಿಯೋವನ್ನು ಕೆ.ಸಿ.ಕಾರಿಯಪ್ಪ ಬಹಿರಂಗಗೊಳಿಸಿದ್ದಾರೆ. ಇಬ್ಬರ ನಡುವಿನ ಆರೋಪ, ಪ್ರತ್ಯಾರೋಪದ ನಡುವೆ ಮಾದಕ ಪದಾರ್ಥ ಸೇವನೆಯ ವಿಚಾರವೂ ಪ್ರಸ್ತಾಪವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇಬ್ಬರೂ ಪ್ರತ್ಯೇಕವಾಗಿ ಆರ್.ಟಿ.ನಗರ ಹಾಗೂ ಬಗಲುಗುಂಟೆ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಗೆ ಈಗಾಗಲೇ ವಿಚಾರಣೆಗೆ ಹಾಜರಾಗಿ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸುವಂತೆ ಆರ್.ಟಿ.ನಗರ ಪೊಲೀಸರು ನೋಟೀಸ್ ನೀಡಿದ್ದಾರೆ. ಇವರಿಬ್ಬರ ಆರೋಪದ ನಡುವೆ ಕೆಲವು ವಿಡಿಯೋಗಳು ಬಹಿರಂಗವಾಗಿದ್ದು, ತನಿಖೆಯ ಭಾಗವಾಗಿ ಅವುಗಳ ಸತ್ಯಾಸತ್ಯತೆ ಮತ್ತು ಆ ವಿಡಿಯೋಗಳು ಬಹಿರಂಗವಾದ ಸಂದರ್ಭದ ಕುರಿತು ತನಿಖೆ ನಡೆಸಲಾಗುವುದು'' ಎಂದು ತಿಳಿಸಿದರು.

ಏತನ್ಮಧ್ಯೆ, ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಕ್ರಿಕೆಟಿಗನ ವಿರುದ್ಧ ಮಹಿಳೆ ಮಾಡಿರುವ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನೂ 2019ರಲ್ಲಿ ಡ್ರಗ್ ಕೇಸ್​​ನಲ್ಲಿ ರಣಜಿ ಆಟಗಾರ ಗೌತಮ್ ಬಂಧನದ ವೇಳೆ ಕೆಸಿ ಕಾರಿಯಪ್ಪ ಹೆಸರು ಕೂಡ ಕೇಳಿ ಬಂದಿತ್ತು. ಸದ್ಯ ಮತ್ತೆ ಕಾರಿಯಪ್ಪ ಮೇಲೆ ಡ್ರಗ್ ಆರೋಪ ಕೇಳಿ ಬಂದಿರೋ ಹಿನ್ನೆಲೆ ಮತ್ತೊಮ್ಮೆ ಕಾರಿಯಪ್ಪರನ್ನು ಸಿಸಿಬಿ ವಿಚಾರಣೆ ನಡೆಸೋ ಸಾಧ್ಯತೆಯಿದೆ.

ಏನಿದು ಪ್ರಕರಣ?
ಡಿ. 25ರಂದು ಕೆ.ಸಿ.ಕಾರಿಯಪ್ಪ ಬಗಲಗುಂಟೆ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ, "ಈ ಹಿಂದೆ ನಾನು ಅವರೊಂದಿಗೆ ಸಂಬಂಧದಲ್ಲಿದ್ದು, ನಂತರ ಇಬ್ಬರೂ ದೂರವಾಗಿದ್ದೆವು. ಇದೀಗ 'ನಿನ್ನ ಕ್ರಿಕೆಟ್ ಜೀವನ ಅಂತ್ಯಗೊಳಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ವಿರುದ್ಧ ಬರೆಯುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ' ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇವೆಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದರೂ ಡಿಸೆಂಬರ್ 22ರಂದು ಬಗಲಗುಂಟೆಯ ರಾಮಯ್ಯ ಲೇಔಟ್‌ನಲ್ಲಿರುವ ತಮ್ಮ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಪೋಷಕರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, "ನಾನು‌ ಮತ್ತು ಕಾರಿಯಪ್ಪ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು. ಇಬ್ಬರೂ ಒಂದೇ ಸಮುದಾಯದವರು. ಸಂಬಂಧದಲ್ಲಿದ್ದಾಗ ಇಬ್ಬರ ನಡುವೆ ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ಬೆಳೆದು ನಾನು ಗರ್ಭ ಧರಿಸಿದ್ದೆ. ಅವರು ಬಲವಂತವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು. ಅಲ್ಲದೇ ನನ್ನಿಂದ ಹಂತಹಂತವಾಗಿ 2 ಲಕ್ಷ ರೂ. ಹಣ ಪಡೆದುಕೊಂಡರು. ನಂತರದಲ್ಲಿ ಅವರ ಪೋಷಕರು, "ನೀನು ವಿಚ್ಛೇದಿತೆ. ನಮ್ಮ ಮಗನನ್ನು ಮದುವೆಯಾಗಬೇಡ" ಎಂದು ಅವಾಚ್ಯವಾಗಿ ನಿಂದಿಸಿದರು. ಡಿಸೆಂಬರ್ 18ರಂದು ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ಬಂದಿದ್ದ ಕಾರಿಯಪ್ಪ, "ನೀನು ಈಗಾಗಲೇ ಡಿವೋರ್ಸ್ ಆದವಳು. ನಿನ್ನನ್ನು ಕಂಡರೆ ನನಗಿಷ್ಟವಿಲ್ಲ. ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ" ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com