ಚಾಮರಾಜನಗರ: ಸುದೀರ್ಘ ಕಾಯುವಿಕೆ ಅಂತ್ಯ, ಮನೆ ಬಾಗಿಲಲ್ಲೇ ಆಧಾರ್ ಪಡೆದ ಆದಿವಾಸಿಗಳು!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆರಂಭವಾಗಿ ಹದಿನಾಲ್ಕು ವರ್ಷಗಳ ನಂತರ ಹಿಂದುಳಿದ ಚಾಮರಾಜನಗರ ಜಿಲ್ಲೆಯ ದೂರದ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ತಮ್ಮ ಆಧಾರ್ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆರಂಭವಾಗಿ ಹದಿನಾಲ್ಕು ವರ್ಷಗಳ ನಂತರ ಹಿಂದುಳಿದ ಚಾಮರಾಜನಗರ ಜಿಲ್ಲೆಯ ದೂರದ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ತಮ್ಮ ಆಧಾರ್ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆಚ್ಚಿನ ಗ್ಯಾರಂಟಿ ಯೋಜನೆ ಪಡೆಯಲು ಅಥವಾ ಉಚಿತ ಆಹಾರ ಅಥವಾ ಆರೋಗ್ಯ ರಕ್ಷಣೆ ಪಡೆಯಲು ಆಧಾರ್ ಕಾರ್ಡ್‌ಗಳನ್ನು ನೀಡಲು ಜಿಲ್ಲಾಡಳಿತ ಅವರ ಮನೆಬಾಗಿಲು ತಲುಪಿರುವುದರಿಂದ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿದೆ.

ಚಾಮರಾಜನಗರ ಜಿಲ್ಲೆಯ ಪ್ರತಿ ಮಗು ಅಥವಾ ವ್ಯಕ್ತಿಯೂ ಕಾಲಮಿತಿಯಲ್ಲಿ ಆಧಾರ್ ಕಾರ್ಡ್ ಪಡೆಯುವಂತೆ  ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಜನರು ಧನ್ಯವಾದ ಹೇಳುತ್ತಿದ್ದಾರೆ. 32 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 158 ಬುಡಕಟ್ಟು ಕಾಲೋನಿಗಳಿದ್ದರೂ, ದೂರದ ಹಳ್ಳಿಗಳಿಂದ ಅನೇಕ ವೃದ್ಧರು ಆಧಾರ್ ಕಾರ್ಡ್‌ಗಾಗಿ ಮನವಿ ಮಾಡಲು ಜಿಲ್ಲಾಡಳಿತ ಕಟ್ಟಡಕ್ಕೆ  ಆಗಮಿಸುತ್ತಿದ್ದರು.

ವಿಶೇಷವಾದ ಆಧಾರ್ ಕಿಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ, ಶಿಬಿರ ನಡೆಸಲು ಮತ್ತು ಅವರ ಮನೆ ಬಾಗಿಲಿಗೆ ಕಾರ್ಡ್‌ಗಳನ್ನು ವಿತರಿಸಲು ಅಧಿಕಾರಿಗಳನ್ನು ನಿಯೋಜಿಸಿದ್ದರು. ಆಗಸ್ಟ್ 30, 2023 ರಿಂದ ಪ್ರಾರಂಭವಾದ ಈ ಅಭಿಯಾನ 61 ಬುಡಕಟ್ಟು ಹಾಡಿಗಳನ್ನು ಒಳಗೊಂಡಿದ್ದು, 2,454 ನವೀಕರಣ ಕಾರ್ಡ್‌ಗಳು,  520 ಹೊಸ ಕಾರ್ಡ್‌ಗಳು ಸೇರಿದಂತೆ 2,874 ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. 

ಆರೋಗ್ಯ ಕಾರ್ಯಕರ್ತರು, ಗಿರಿಜನ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಆರೋಗ್ಯ ಸಿಬ್ಬಂದಿ ಒಳಗೊಂಡ ಅಧಿಕಾರಿಗಳ ತಂಡ ಮನೆ ಮನೆಗೆ ತೆರಳಿ ಪಡಿತರ ಚೀಟಿ, ಆರೋಗ್ಯ ಕಾರ್ಡ್‌ಗಳು, ಜಾತಿ ಪ್ರಮಾಣಪತ್ರಗಳು ಮತ್ತು ಇಲಾಖೆಗಳಿಂದ ಇತರ ಸವಲತ್ತುಗಳನ್ನು ಹೊಂದಿದೆಯೇ ಎಂದು ಪರಿಶೀಲಿಸುತ್ತಿದೆ.

"ಡೇಟಾಬೇಸ್ ರಚಿಸಲು ಡೇಟಾವನ್ನು ಸಂಗ್ರಹಿಸಲಾಗಿದೆ, ಇದರಿಂದ ಆಸ್ಪತ್ರೆಗೆ ಹೋಗುವವರು ತಮ್ಮ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಮತ್ತು ಪಡಿತರ ಚೀಟಿಯನ್ನು ಒದಗಿಸಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. 1,500 ಕ್ಕೂ ಹೆಚ್ಚು ಆದಿವಾಸಿಗಳು ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾಧ್ಯವಾಗದ ಕಾರಣ ಅವರ ಆಧಾರ್ ಕಾರ್ಡ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ, ಅನೇಕರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರಗಳನ್ನು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಬುಡಕಟ್ಟು ಜನರು ಪೌಷ್ಠಿಕ ಆಹಾರ ಪಡೆಯುತ್ತಿದ್ದರೂ, ಅವರು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಇನ್ನೂ ಪ್ರಯೋಜನಗಳನ್ನು ಪಡೆದಿಲ್ಲ. ಅವರಲ್ಲಿ ಹೆಚ್ಚಿನವರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿದಿಲ್ಲ. ನಮ್ಮಲ್ಲಿ ಆಧಾರ್ ಕಾರ್ಡ್ ಇಲ್ಲದಿರುವಾಗ ಸರ್ಕಾರದ ಯೋಜನೆಗಳ ಸದುಪಯೋಗವನ್ನು ಹೇಗೆ ಪಡೆಯಲು ಸಾಧ್ಯ ಎಂದು  ಬುಡಕಟ್ಟು ಜನಾಂಗದ ಬೊಮ್ಮಯ್ಯ ಹೇಳಿದರು.ಶಕ್ತಿ ಕಾರ್ಯಕ್ರಮದಡಿ ಉಚಿತ ಬಸ್ ಸೌಲಭ್ಯ ಬಳಸಲಾಗದ ಬುಡಕಟ್ಟು ಮಹಿಳೆ ರತ್ನೆ, ಇತ್ತೀಚೆಗೆ ತನ್ನ ಆಧಾರ್ ಕಾರ್ಡ್ ತೋರಿಸಿ ಉಚಿತ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಈಗ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ.

ಎಲ್ಲಾ 8,200 ಕುಟುಂಬಗಳ ಡೇಟಾಬೇಸ್ ರಚಿಸಲಾಗುತ್ತಿದೆ ಎಂದು ಗಿರಿಜನ ಅಧಿಕಾರಿ ಮನುಜುಳಾ ಹೇಳಿದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್,  ಪ್ರತಿ ಮನೆಯವರು ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಬಳಸುತ್ತಾರೆ ಎಂಬ ಖಾತ್ರಿಗೆ ಬಯಸುತ್ತಿದ್ದು, ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಿದೆ ಮತ್ತು ನಿಯಮಿತವಾಗಿ ಶಿಬಿರಗಳನ್ನು ನಡೆಸುತ್ತಿದೆ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಹೊಂದಿರುವ ಹಳ್ಳಿಗಳಲ್ಲಿ ಸ್ಥಳದಲ್ಲೇ ಪಡಿತರ ಮತ್ತು ಆಧಾರ್ ಕಾರ್ಡ್‌ಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com