ಹಾಸನ: ಐಫೋನ್'ಗಾಗಿ ಡೆಲಿವರಿ ಬಾಯ್ ಕೊಂದು, ಶವವನ್ನು 2 ದಿನ ಶೌಚಾಲಯದಲ್ಲಿರಿಸಿದ್ದ ದುರುಳ!

ಐಫೋನ್ ಆಸೆಗೆ ಡೆಲಿವರಿ ಬಾಯ್'ನನ್ನು ಹತ್ಯೆ ಮಾಡಿರುವ ಘಟನೆಯೊಂದು ಹಾಸನದ ಅರಸೀಕೆರೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಐಫೋನ್ ಆಸೆಗೆ ಡೆಲಿವರಿ ಬಾಯ್'ನನ್ನು ಹತ್ಯೆ ಮಾಡಿರುವ ಘಟನೆಯೊಂದು ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

ಹೇಮಂತ್ ನಾಯಕ್ (20) ಹತ್ಯೆಯಾದ ಡೆಲಿವರಿ ಬಾಯ್ ಆಗಿದ್ದಾನೆ. ಆರೋಪಯನ್ನು ಹೇಮಂತ್ ಕುಂಜೆ (24) ಎಂದು ಗುರ್ತಿಸಲಾಗಿದೆ.

ಆರೋಪಿ ಹೇಮಂತ್ ಕುಂಜೆ ಆನ್'ಲೈನ್ ನಲ್ಲಿ ಐಪೋನ್ ಆರ್ಡರ್ ಮಾಡಿದ್ದಾರೆ. ಇದರಂತೆ ಫೆಬ್ರವರಿ 7 ರಂದು ಹೇಮಂತ್ ನಾಯಕ್ ಅವರು ಫೋನ್ ಡೆಲಿವರಿ ನೀಡಲು ಲಕ್ಷ್ಮೀಪುರಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿ ಮನೆಯೊಳಗೆ ಬರುವಂತೆ ಹೇಳಿ ಹಣ ತರುವುದಾಗಿ ಒಳಗೆ ಹೋಗಿದ್ದಾನೆ. ಬಳಿಕ ಚಾಕುವಿನೊಂದಗೆ ಹೊರ ಬಂದು ಹೇಮಂತ್ ನಾಯಕ್ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚುಚ್ಚಿದ್ದಾನೆ. ಬಳಿಕ ಹೇಮಂತ್ ಕತ್ತು ಹಿಸುಕಿದ್ದಾನೆ. ಹೇಮಂತ್ ನಾಯಕ್ ಸತ್ತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಶವವನ್ನು ಮನೆಯ ಶೌಚಾಲಯದಲ್ಲಿ 2 ದಿನ ಇರಿಸಿದ್ದಾನೆ. ನಂತರ ಮನೆಯಿಂದ ಸ್ವಲ್ಪ ದೂರಕ್ಕೆ ಶವವನ್ನು ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ.

ಶನಿವಾರ ರಾತ್ರಿ ಅರಸೀಕೆರೆಯ ಕೆಎಸ್ಆರ್'ಟಿಸಿ ಬಸ್ ನಿಲ್ದಾಣದಲ್ಲಿ ಆರೋಪಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ಈ ವೇಳೆ ವಿಚಾರಣೆಗೊಳಪಡಿಸಿದಾಗ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಘಟನೆ ವೇಳೆ ಆರೋಪಿ ತಾಯಿ ಚಿಕ್ಕಮಗಳೂರು ಜಿಲ್ಲೆಯ ಬಾಗಲೂರಿನಲ್ಲಿರುವ ಸಹೋದರಿಯ ಮನೆಗೆ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೇಬಿ ಎಂಬ ಹೆಸರಿನಲ್ಲಿ ರೂ.46,000 ಮೌಲ್ಯದ ಐಫೋನ್ ಬುಕ್ ಮಾಡಿದ್ದಾರೆ. ಪಿಯುಸಿ ಫೇಲ್ ಆಗಿದ್ದ ಹೇಮಂತ್'ಗೆ ಐಫೋನ್ ಖರೀದಿಸಲು ಸಾಧ್ಯವಾಗಿಲ್ಲ. ಫೋನ್'ಗಾಗಿ ಹೇಮಂತ್ ನಾಯಕ್ ನನ್ನು ಹತ್ಯೆ ಮಾಡಿದ್ದಾನೆ. ಹೇಗಾದರೂ ಫೋನ್ ಖರೀದಿ ಮಾಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ನಂತರ ಡೆಲಿವರಿ ಬಾಯ್ ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ. ಆರೋಪಿ ನೀಡಿದ ಮಾಹಿತಿಯಂತೆ ಹೇಮಂತ್ ನಾಯಕ್ ಅವರ ಅರೆ ಬೆಂದಿದ್ದ ಶವವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಈ ಹಿಂದೆ ಹಲವು ಆನ್ ಲೈನ್ ಸಂಸ್ಥೆಗಳಲ್ಲಿ ಕೊರಿಯಲ್ ಬಾಯ್ ಆಗಿ ಕೆಲಸ ಮಾಡಿದ್ದ. ಪಾರ್ಸೆಲ್ ಗಳನ್ನು ಆಗಾಗ್ಗೆ ಕಳ್ಳತನ ಮಾಡಿದ್ದಕ್ಕಾಗಿ ಕೆಲಸ ಕಳೆದುಕೊಂಡಿದ್ದ. ಆರೋಪಿ ತನ್ನ ಸಹೋದರ ಮಂಜನಾಥ್ ಹಾಗೂ ತಾಯಿಯೊಂದಿಗೆ ಕೊಳಗೇರಿ ಪ್ರದೇಶದಲ್ಲಿ ವಾಸವಿದ್ದ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com