ಲೋಕೋಪಯೋಗಿ ಇಲಾಖೆಯ 373 ಗುತ್ತಿಗೆಗಳಲ್ಲಿ ಶೇ.75ರಷ್ಟು ಕಾಮಗಾರಿಗಳನ್ನು ಒಬ್ಬರು, ಇಬ್ಬರು ಬಿಡ್ಡರ್‌ಗಳಿಗೆ ನೀಡಲಾಗಿದೆ: ಸಿಎಜಿ

ಗುತ್ತಿಗೆದಾರರಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆಯೇ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) 2016ರಿಂದ 2021ರ ಅವಧಿಯಲ್ಲಿ ನಡೆದಿರುವ ‘ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆ’ಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಮಹಾ ಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗುತ್ತಿಗೆದಾರರಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆಯೇ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) 2016ರಿಂದ 2021ರ ಅವಧಿಯಲ್ಲಿ ನಡೆದಿರುವ ‘ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆ’ಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಮಹಾ ಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.

2021ರ ಮಾರ್ಚ್‌ಗೆ ಕೊನೆ ಗೊಂಡಂತೆ ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದಲ್ಲಿ ಬುಧವಾರ ಮಂಡಿಸಲಾಯಿತು.

2016–2021ರ ಅವಧಿಯಲ್ಲಿ ಪಿಡಬ್ಲ್ಯುಡಿ ರಸ್ತೆ ಕಾಮಗಾರಿಗಳಿಗಾಗಿ ರೂ. 17,046.97 ಕೋಟಿ ವೆಚ್ಚ ಮಾಡಲಾಗಿತ್ತು. ಈ ಅವಧಿಯ ರೂ.3,583.28 ಕೋಟಿ ವೆಚ್ಚದ 499 ಕಾಮಗಾರಿಗಳ ಕುರಿತು ಸಿಎಜಿ ಪರೀಕ್ಷಾ ತನಿಖೆ ನಡೆಸಿದೆ.

ನೂರಾರು ಕಾಮಗಾರಿಗಳಲ್ಲಿ ಸ್ಪರ್ಧಾತ್ಮಕ ಬಿಡ್‌ಗಳು ಸಲ್ಲಿಕೆಯಾಗದಿದ್ದರೂ ಮಾನದಂಡ ಉಲ್ಲಂಘಿಸಿ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ಷರತ್ತುಗಳನ್ನು ನಿಗದಿಪಡಿಸಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಕುತೂಹಲಕಾರಿಯಾದ ವಿಚಾರವೆಂದರೆ ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಮೂರು ಪಕ್ಷಗಳು (ಕಾಂಗ್ರೆಸ್, ಜನತಾ ದಳ (ಜಾತ್ಯತೀತ) ಮತ್ತು ಬಿಜೆಪಿ) ಅಧಿಕಾರದಲ್ಲಿದ್ದವು ಎಂಬುದಾಗಿದೆ.

ಭಾರತೀಯ ರಸ್ತೆ ಕಾಂಗ್ರೆಸ್‌ ಮಾನದಂಡಗಳು ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂದಾಜುಪಟ್ಟಿ ಸಿದ್ಧಪಡಿಸಿರುವುದು, ಗುತ್ತಿಗೆದಾರರಿಂದ ನಿಗದಿತ ಪ್ರಮಾಣದ ಬ್ಯಾಂಕ್‌ ಭದ್ರತೆ ಪಡೆಯದೇ ಇರುವುದು, ಗುತ್ತಿಗೆದಾರರಿಗೆ ಅನಧಿಕೃತವಾಗಿ ಮುಂಗಡಗಳನ್ನು ಪಾವತಿಸಿರುವುದು ಸಿಎಜಿ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಪೂರಕವಾಗಿ ನಡೆಸಿದ ವಾಹನ ಸಂಚಾರ ಗಣತಿಯಲ್ಲೇ ಲೋಪವಿತ್ತು. ಇದರಿಂದಾಗಿ ಕೆಲವು ಕಾಮಗಾರಿ ಗಳಲ್ಲಿ ಅನಗತ್ಯ ವೆಚ್ಚ ಮಾಡಲಾಗಿದೆ. ಹಲವು ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್‌ ಆಹ್ವಾನಿಸಿ ನೂರಾರು ದಿನಗಳ ಬಳಿಕ ಬಿಡ್‌ ಅಂತಿಮಗೊಳಿಸಿರುವುದೂ ಕಂಡುಬಂದಿದೆ ಎಂದು ಸಿಎಜಿ ಹೇಳಿದೆ.

ರೂ. 2,738.86 ಕೋಟಿ ವೆಚ್ಚದ 373 ಕಾಮಗಾರಿಗಳಿಗೆ ಕೇವಲ ಒಂದು ಅಥವಾ ಎರಡು ಬಿಡ್‌ಗಳು ಸಲ್ಲಿಕೆಯಾಗಿದ್ದವು. ಇಂತಹ ಪ್ರಕರಣಗಳಲ್ಲಿ ಮರು ಟೆಂಡರ್‌ ನಡೆಸಬೇಕೆಂಬ ನಿಯಮ ಪಾಲಿಸದೇ ಬಿಡ್‌ ಅಂತಿಮಗೊಳಿಸಲಾಗಿದೆ ಎಂದು ಸಿಎಜಿ ಆಕ್ಷೇಪಿಸಿದೆ.

131 ಕಾಮಗಾರಿಗಳಿಗೆ ತಲಾ ಒಂದು ಬಿಡ್‌ ಮಾತ್ರ ಸಲ್ಲಿಕೆಯಾಗಿದ್ದರೂ ಅವರಿಗೇ ಗುತ್ತಿಗೆ ನೀಡಲಾಗಿದೆ. 242 ಕಾಮಗಾರಿಗಳಿಗೆ ತಲಾ ಎರಡು ಬಿಡ್‌ ಸಲ್ಲಿಕೆಯಾಗಿದ್ದು, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. ಶೇಕಡ 10ಕ್ಕಿಂತ ಹೆಚ್ಚಿನ ಪ್ರೀಮಿಯಂ ಹೊಂದಿದ್ದ 42 ಬಿಡ್‌ಗಳನ್ನು ಕಾನೂನುಬಾಹಿರವಾಗಿ ಅನುಮೋದಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ.18.68 ಕೋಟಿಯಷ್ಟು ಹೊರೆಯಾಗಿದೆ ಎಂದು ತಿಳಿಸಿದೆ.

ಹಲವು ಗುತ್ತಿಗೆದಾರರು ನಿಯಮ ಉಲ್ಲಂಘಿಸಿದ್ದಾರೆ...
ಹಲವು ಗುತ್ತಿಗೆದಾರರು ನಿಯಮ ಉಲ್ಲಂಘಿಸಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕೆಪಿಡಬ್ಲ್ಯೂಡಿ ಕೋಡ್ ಅಡಿಯಲ್ಲಿ ಅಗತ್ಯ ನಿಬಂಧನೆಗಳನ್ನು ಸೇರಿವಂತೆ ಸಿಎಜಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇಂಡಿಯನ್ ರೋಡ್ ಕಾಂಗ್ರೆಸ್ ಮಾರ್ಗಸೂಚಿಗಳ ಪ್ರಕಾರ, ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯ ಸ್ಥಾಪಿಸಬೇಕು, ಆದರೆ ಅನೇಕ ಗುತ್ತಿಗೆದಾರರು ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ. 333 ಪ್ರಕರಣಗಳಲ್ಲಿ ಕಾಮಗಾರಿ ಸ್ಥಳಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಗುತ್ತಿಗೆದಾರರಿಗೆ ರೂ.1,408.37 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಗುತ್ತಿಗೆದಾರರು ಯಾವುದೇ ಪ್ರಯೋಗಾಲಯ ಸ್ಥಾಪಿಸಿರಲಿಲ್ಲ. ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳನ್ನು ಬಿಲ್‌ಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಬಿಲ್‌ಗಳನ್ನು ತೆರವುಗೊಳಿಸುವ ಮೊದಲು ಇಲಾಖೆಯು ಗುತ್ತಿಗೆದಾರರಿಗೆ ದಂಡ ವಿಧಿಸಬಹುದಿತ್ತು. ಆದರೆ, ಅದನ್ನು ಮಾಡಿಲ್ಲ. ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳಿಲ್ಲದೆ ಹಣ ಪಾವತಿ ಮಾಡುವ ಅಧಿಕಾರಿಗಳ ವಿುದ್ಧ ಕ್ರಮ ಕೈಗೊಳ್ಳುವಂತ ಸಿಎಜಿ ಸರ್ಕಾರಕ್ಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com