ಬಿಡಿಎ ಮತ್ತು ಬಿಬಿಎಂಪಿ ಆಸ್ತಿಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ; ಬೆಂಗಳೂರು ಕಸದ ಸಿಟಿಯಾಗಲು ಬಿಡುವುದಿಲ್ಲ: ಸಿಎಂ ಬೊಮ್ಮಾಯಿ

ಬಿಡಿಎ ಮತ್ತು ಬಿಬಿಎಂಪಿ ಆಸ್ತಿಗಳ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಡಿಎ ಮತ್ತು ಬಿಬಿಎಂಪಿ ಆಸ್ತಿಗಳ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವರಚಿಕ್ಕನಹಳ್ಳಿಯಲ್ಲಿ 1990ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ 3.23 ಎಕರೆ ಭೂಮಿಗೆ ಸಂಬಂಧಿಸಿದಂತೆ ನಿನ್ನೆ ವಿಧಾನಪರಿಷತ್‌ನಲ್ಲಿ ಜೆಡಿಎಸ್‌ ಎಂಎಲ್‌ಸಿ ಮರಿತಿಬ್ಬೇಗೌಡ ವಿಷಯ ಪ್ರಸ್ತಾಪಿಸಿದರು.‘‘1996ರಲ್ಲಿ 50 ನಿವೇಶನಗಳ ಲೇಔಟ್‌ ರಚಿಸಿ ಕೇವಲ ಏಳು ಮಂದಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗಿತ್ತು. 2016ರಲ್ಲಿ ಯೋಜನೆಯಲ್ಲಿ ಲೋಪ ಎಸಗಲಾಗಿದೆ ಎಂದು ನ್ಯಾಯಾಲಯದ ಆದೇಶವಿದ್ದು, ಇಂದು 500 ಕೋಟಿ ಮೌಲ್ಯದ ಆಸ್ತಿಯನ್ನು ಭೂಗಳ್ಳರು ಕಬಳಿಸಿದ್ದಾರೆ.ಈ ಬಗ್ಗೆ ಹಾಗೂ ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ನ್ಯಾಯಾಲಯಗಳಲ್ಲಿ ಪ್ರಕರಣಗಳಿರುವ ಬಿಡಿಎ ಮತ್ತು ಬಿಬಿಎಂಪಿ ಆಸ್ತಿಗಳನ್ನು ರಕ್ಷಿಸಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂದು ಒಪ್ಪಿಕೊಂಡರು. ಈ ಪರಿಸ್ಥಿತಿ ಬದಲಾಗಬೇಕು. ನಾನು ಈ ನಿರ್ದಿಷ್ಟ ವಿಷಯದ ಬಗ್ಗೆ ತನಿಖೆಗೆ ಆದೇಶಿಸುತ್ತೇನೆ ಮತ್ತು ತಕ್ಷಣ ನ್ಯಾಯಾಲಯವನ್ನು ಸಂಪರ್ಕಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು. 

ಬೆಂಗಳೂರು ಗಾರ್ಬೇಜ್ ಸಿಟಿಯಾಗಲು ಬಿಡುವುದಿಲ್ಲ: ಇದೇ ವೇಳೆ, ನಗರದಲ್ಲಿ ಕಸ ನಿರ್ವಹಣೆಗೆ ಸಂಬಂಧಿಸಿದ ಕಾಂಗ್ರೆಸ್‌ ಎಂಎಲ್‌ಸಿ ಪಿ.ಆರ್‌.ರಮೇಶ್‌ ಮಾಗಡಿ ರಸ್ತೆಯಲ್ಲಿ ಸುಮಾರು 500 ಮೀಟರ್‌ ವರೆಗೆ ಕಸ ಸುರಿಯಲಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಮನಸ್ಥಿತಿ ಮುಂದುವರಿಯುತ್ತದೆ ಎಂದು ಟೀಕಿಸಿದರು. ಅದಕ್ಕೆ ಸಿಎಂ ಬೊಮ್ಮಾಯಿ, ಕೆಲವು ಸ್ಥಳದಲ್ಲಿ ಕೆಲವು ಸಮಸ್ಯೆಗಳಿವೆ ಎಂದ ಮಾತ್ರಕ್ಕೆ, ಇಡೀ ನಗರದಲ್ಲಿ ಸಮಸ್ಯೆ ಇದೆ ಎಂದು ಅರ್ಥವಲ್ಲ. ಬೆಂಗಳೂರನ್ನು ಕಸದ ನಗರಿಯಾಗಲು ಬಿಡುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com