ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರದಿಂದ ಲಾರಿ ಮುಷ್ಕರ; ಬೆಂಗಳೂರಿನಲ್ಲಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರಿನ ಕರ್ನಾಟಕ ಹಾಲು ಒಕ್ಕೂಟದ ಕಚೇರಿಗಳ ಮುಂದೆ ಬಮುಲ್ ಹಾಲು ಸರಬರಾಜು ಮಾಡುವ ವಾಹನಗಳ ಮಾಲೀಕರ ಮುಷ್ಕರ ಮುಂದುವರಿಸಿದ್ದರಿಂದಾಗಿ ನಗರದಲ್ಲಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ನಂದಿನಿ ಹಾಲು
ನಂದಿನಿ ಹಾಲು
Updated on

ಬೆಂಗಳೂರು: ಬೆಂಗಳೂರಿನ ಕರ್ನಾಟಕ ಹಾಲು ಒಕ್ಕೂಟದ ಕಚೇರಿಗಳ ಮುಂದೆ ಬಮುಲ್ ಹಾಲು ಸರಬರಾಜು ಮಾಡುವ ವಾಹನಗಳ ಮಾಲೀಕರ ಮುಷ್ಕರ ಮುಂದುವರಿಸಿದ್ದರಿಂದಾಗಿ ನಗರದಲ್ಲಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಹೊಸ ನಿಯಮ ಮತ್ತು ವೆಚ್ಚವನ್ನು ಪರಿಷ್ಕರಿಸಲು ಸಾಗಣೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯ ಮೇರೆಗೆ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಸಲಾಗುತ್ತಿದೆ. 

ಕೆಎಂಎಫ್ ಮತ್ತು ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ಹಾಲು ಸಾಗಣೆ ವೆಚ್ಚವನ್ನು ಪರಿಷ್ಕರಿಸಲು ವಿಶೇಷವಾಗಿ ಗ್ಯಾಸ್ ಬೆಲೆಯಲ್ಲಿ ಏರಿಕೆಯಾದಾಗ ನಿರಾಕರಿಸಿದ್ದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 

ಬಮುಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ 250 ಲಾರಿಗಳ ಮಾಲೀಕರು ಶುಕ್ರವಾರ ಮುಷ್ಕರ ಪ್ರಾರಂಭಿಸಿದ್ದು, ಗ್ಯಾಸ್ ಬೆಲೆ ಏರಿಕೆಯಾದರೂ ಕೂಡ ವೆಚ್ಚದಲ್ಲಿ ತಮಗೆ ಸಮರ್ಪಕವಾಗಿ ಪಾವತಿಸಲಾಗಿಲ್ಲ ಎಂದು ದೂರಿದ್ದಾರೆ.

ಈಮಧ್ಯೆ, ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಫೆಡರೇಶನ್‌ನ ಜಿ ಷಣ್ಮುಗಪ್ಪ ಮಾತನಾಡಿ, ಹಾಲು ಸಾಗಣೆಯ ಸಮಯದಲ್ಲಿ ಹಾಳಾದ ಪ್ರತಿ ಪ್ಯಾಕೆಟ್ ಹಾಲಿಗೆ ಸಾಗಣೆದಾರರೇ ಹೆಚ್ಚಿನ ದರವನ್ನು ನೀಡಬೇಕೆಂದು ಕೆಎಂಎಫ್ ಒತ್ತಾಯಿಸಿದೆ ಎಂದರು.

ಬಮುಲ್ ಟ್ರಾನ್ಸ್‌ಪೋರ್ಟರ್ಸ್ ಅಸೋಸಿಯೇಶನ್ ಮುಖ್ಯಸ್ಥ ಗೋವಿಂದಪ್ಪ ಮಾತನಾಡಿ, ಹಾಲು ಪೂರೈಕೆದಾರರು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ದರ ಹೆಚ್ಚಿಸುವಂತೆ ಬಮುಲ್‌ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಶೇ 10ರಷ್ಟು ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರೂ, ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು.

ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಶೇ 10ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ತಿರುಗೇಟು ನೀಡಿದರು. ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. ಆದರೆ, ಸಾರಿಗೆದಾರರು ಮುಂದೆ ಬರಲು ನಿರಾಕರಿಸಿದ್ದಾರೆ. ಪೂರೈಕೆದಾರರು 20 ರಿಂದ 25 ವರ್ಷ ಹಳೆಯದಾದ ಟ್ರಕ್‌ಗಳನ್ನು ಬಳಸುತ್ತಿದ್ದಾರೆ. ಅದಕ್ಕಾಗಿಯೇ ನಾವು ಮೂರು ಬಾರಿ ಟೆಂಡರ್‌ಗಳನ್ನು ಆಹ್ವಾನಿಸಿದ್ದೇವೆ. ಆದರೆ, ಯಾರೂ ಮುಂದೆ ಬಂದಿಲ್ಲ. ನಾವು ಅವರೊಂದಿಗೆ ಮಾತನಾಡಲು ಸಿದ್ಧರಿದ್ದೇವೆ. ಆದರೆ, ಅವರು ನಮ್ಮೊಂದಿಗೆ ಮಾತನಾಡಲು ನಿರಾಕರಿಸುತ್ತಾರೆ ಎಂದು ಹೇಳಿದರು.

ಬಮುಲ್ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಿರುವುದರಿಂದ ಯಾರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಮತ್ತು ಟೆಂಡರ್‌ಗಳಲ್ಲಿ ಬಮುಲ್ ನಿಗದಿಪಡಿಸಿದ ವಿಶೇಷಣಗಳನ್ನು ಪೂರೈಸಲು ಸಾಗಣೆದಾರರಿಗೆ ಕಷ್ಟಕರವಾಗಿದೆ ಎಂದು ಗೋವಿಂದಪ್ಪ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com