ಕಾರ್ಮಿಕರ ಕಾರ್ಡ್: ಅಸಲಿಗರಿಗಿಂತ ನಕಲಿ ಫಲಾನುಭವಿಗಳೇ ಹೆಚ್ಚು; ಕಾರ್ಮಿಕ ಇಲಾಖೆ

ಹಲವಾರು ಜನರು ಕಾರ್ಮಿಕ ಕಾರ್ಡ್ ಪಡೆದು ಅಸಲಿ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದು, ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ರದ್ದುಪಡಿಸುವುದಲ್ಲದೇ, ಅಂಥಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಲವಾರು ಜನರು ಕಾರ್ಮಿಕ ಕಾರ್ಡ್ ಪಡೆದು ಅಸಲಿ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದು, ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ರದ್ದುಪಡಿಸುವುದಲ್ಲದೇ, ಅಂಥಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.

ಆಹಾರ ಇಲಾಖೆಯು ನಕಲಿ ಬಿಪಿಎಲ್ ಕಾರ್ಡ್ ರದ್ದತಿ ಅಭಿಯಾನ ಕೈಗೊಂಡಂತೆಯೇ ಕಾರ್ಮಿಕ ಇಲಾಖೆ ಕೂಡ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ. ಆ ಮೂಲಕ ಕಾರ್ಮಿಕರಲ್ಲದ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಲ್ಲುತ್ತಿದ್ದ ಸೌಲಭ್ಯಗಳನ್ನು ರದ್ದು ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಸಹಸ್ರಾರು ಜನ ನಕಲಿ ಕಾರ್ಮಿಕ ಕಾರ್ಡ್ ಪಡೆದು ಬಡ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ನೋಂದಣಿಯನ್ನು ರದ್ದುಪಡಿಸುವುದು ಮಾತ್ರವಲ್ಲ, ಅಂಥಹವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಇಲಾಖೆ ನೀಡುವ ಕಾರ್ಮಿಕರ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಅನರ್ಹ ಫಲಾನುಭವಿಗಳ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಕೈಗೊಂಡಿದೆ, ಬುಧವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಅಭಿಯಾನ ಮುಂದಿನ ಒಂದು ತಿಂಗಳ ಕಾಲ ನಡೆಯಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್‌ಗಳನ್ನು ಕಟ್ಟಡ ಕಾರ್ಮಿಕರು ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ನೀಡಲಾಗುತ್ತದೆ. ವಸತಿ, ವಾಣಿಜ್ಯ ಮತ್ತು ಸರ್ಕಾರಿ ಸೇರಿದಂತೆ ಎಲ್ಲಾ ನಿರ್ಮಾಣ ಯೋಜನೆಗಳಿಗೆ ಶೇ 1 ರಷ್ಟು ಸೆಸ್ ವಿಧಿಸಲಾಗುತ್ತದೆ. ಇದರಿಂದ ಪ್ರತಿ ವರ್ಷ 800 ರಿಂದ 1,000 ಕೋಟಿ ರೂ.ವರೆಗೆ ಸಂಗ್ರಹವಾಗುತ್ತದೆ. ಈ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ.

ರಾಜ್ಯವು 40 ಲಕ್ಷ ನೋಂದಾಯಿತ ಸದಸ್ಯರನ್ನು ಹೊಂದಿದ್ದು, ಅವರು ಆರೋಗ್ಯ, ಶಿಕ್ಷಣ, ವಸತಿ, ಪಿಂಚಣಿ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

“ನಾವು ಆಧಾರ್ ಮತ್ತು ಲೇಬರ್ ಕಾರ್ಡ್‌ನಿಂದ ಸಕ್ರಿಯಗೊಳಿಸಲಾದ ನೇರ ಲಾಭ ವರ್ಗಾವಣೆಯ ಮೂಲಕ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಆದರೆ ಅರ್ಹತೆ ಇಲ್ಲದ ಹೆಚ್ಚಿನ ಸಂಖ್ಯೆಯ ಜನರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದನ್ನು ತಡೆಯಲು ನಾವು ಅಭಿಯಾನವನ್ನು ಆರಂಭಿಸಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ತಾಲೂಕಿನಲ್ಲಿ ಅಧಿಕಾರಿಗಳ ತಂಡಗಳು ಕಾರ್ಮಿಕ ಕಾರ್ಡ್‌ಗಳು ಮತ್ತು ಫಲಾನುಭವಿಗಳನ್ನು ಯಾದೃಚ್ಛಿಕವಾಗಿ ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ಎಂಪಿ ಮಾತನಾಡಿ, ಕಟ್ಟಡ ನಿರ್ಮಾಣ ಮತ್ತು ಸಂಬಂಧಿತ ಉದ್ಯಮಗಳಲ್ಲದ ಗಾರ್ಮೆಂಟ್ಸ್ ಕಾರ್ಮಿಕರು, ಇತರರು ಕೂಡ ಲೇಬರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. “ಕಾರ್ಡ್‌ಗೆ ಅರ್ಹತೆ ಪಡೆಯಲು ಒಬ್ಬರು ನಿರ್ಮಾಣ ಉದ್ಯಮದಲ್ಲಿ ಆರ್ಥಿಕ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಬೇಕು. ಆದರೆ, ಕೆಲ ವ್ಯಕ್ತಿಗಳು ಕಟ್ಟಡ ಕಾರ್ಮಿಕರು ಎಂದು ಹೇಳಿಕೊಂಡು ನಕಲಿ ಕೆಲಸದ ಅನುಭವದ ದಾಖಲೆಗಳನ್ನು ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಇಎಸ್‌ಐ, ಪಿಎಫ್ ಸೌಲಭ್ಯಗಳನ್ನೂ ಪಡೆದುಕೊಂಡಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮಾತನಾಡಿ, ಹೆಚ್ಚಿನ ಸಂಖ್ಯೆಯ ನಕಲಿ ಫಲಾನುಭವಿಗಳ ಬಗ್ಗೆ ಮಾಹಿತಿ ಬಂದಿದೆ. ಈ ಸಂಖ್ಯೆಗಳು ನಮ್ಮ ಅಂದಾಜಿಗಿಂತಲೂ ಹೆಚ್ಚಿವೆ. ಹೀಗಾಗಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಅಂತಹ ನಕಲಿ ಕಾರ್ಡ್‌ಗಳು ಕಂಡುಬಂದಲ್ಲಿ, ಅಂತಹ ಕಾರ್ಮಿಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಬೋಗಸ್ ಕಾರ್ಡ್ ಹೊಂದಿರುವವರು ನಿಜವಾದ ಕಾರ್ಮಿಕರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com