ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ: ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್, ತಪ್ಪಿದ ಭಾರೀ ಅನಾಹುತ

ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಸಂಭವಿಸಿದ್ದು, ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್​ ಶುಕ್ರವಾರ ರಾತ್ರಿ ನೆಲಕ್ಕುರುಳಿ ಬಿದ್ದಿದೆ.
ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್
ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಸಂಭವಿಸಿದ್ದು, ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್​ ಶುಕ್ರವಾರ ರಾತ್ರಿ ನೆಲಕ್ಕುರುಳಿ ಬಿದ್ದಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್​ ನೆಲಕ್ಕುರುಳಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲ್ಕ್ ಬೋರ್ಡ್‌ನಿಂದ ಮಡಿವಾಳಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಮ್ಮ ಮೆಟ್ರೋ ಕಾಮಗಾರಿ ಸಂದರ್ಭ ಪಿಲ್ಲರ್​ಗೆ ಹಾಕುವ ತಂತಿ ಮೇಲೆತ್ತುತ್ತಿರುವಾಗ ಏಕಾಏಕಿ ಕ್ರೇನ್​ನ ಹೈಡ್ರಾಲಿಕ್​ನಲ್ಲಿ ಸಮಸ್ಯೆ ಉಂಟಾಗಿ ಕ್ರೇನ್ ಹಠಾತ್ ಕುಸಿದಿದೆ. ಆಗ ಕಂಬಿಗಳೆಲ್ಲ ವಾಲಿ ಬಿದ್ದಿವೆ. ಅದೃಷ್ಟವಶಾತ್ ಆ ಸಮಯದಲ್ಲಿ ಕಾರ್ಮಿಕರು ಕಡಿಮೆ ಇದ್ದಿದ್ದರಿಂದ ಸಂಭಾವ್ಯ ಭಾರಿ ಅನಾಹುತ ತಪ್ಪಿದೆ. ಈ ಪ್ರಕರಣದಿಂದಾಗಿ ಕೆಲ ಹೊತ್ತು ಮಡಿವಾಳ ಜಂಕ್ಷನ್ ಬಳಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್​ ಜಾರಿ ಬಿಳ್ಳಲು ಕಾರಣ ಏನು ಎಂಬುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

ತಾತ್ಕಾಲಿಕ ಮಾರ್ಗ ಬದಲಾವಣೆ
ಮಡಿವಾಳ ಕಡೆಗೆ ಬರುವವರು ಬಿಟಿಎಂ ಲೇಔಟ್​ ಮೂಲಕ ಸಂಚರಿಸಬೇಕು. ಅದೇ ರೀತಿಯಾಗಿ ಬಿಟಿಎಂ ಲೇಔಟ್​ನಿಂದ ಮಡಿವಾಳಕ್ಕೆ ಹೋಗುವವರು ಎಚ್​ಎಸ್​​ಆರ್​ 14ನೇ ಮುಖ್ಯ ರಸ್ತೆ ಮೂಲಕ ಸಾಗಬೇಕಿದೆ.​

ಇತ್ತೀಚೆಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​​ ಕುಸಿದು ಬಿದ್ದು, ಮಹಿಳೆ ಮತ್ತು ಎರಡು ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ನಗರದ ನಾಗವಾರದಲ್ಲಿ ನಡೆದಿತ್ತು. ಕಲ್ಯಾಣ್​ ನಗರದಿಂದ ಹೆಚ್​ಆರ್​ಬಿಆರ್​ ಲೇಔಟ್​ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್​ನ ರಾಡ್​ಗಳು ರಸ್ತೆ ಮೇಲೆ ಕುಸಿದು ಬಿದ್ದ ಪರಿಣಾಮ ಅವಘಡ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ನಮ್ಮ ಮೆಟ್ರೊ ಕಾಮಗಾರಿ ವೇಳೆ ಮತ್ತೊಂದು ಅವಘಡ ಉಂಟಾಗಿರುವುದು ಸಾರ್ವಜನಿಕರಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com