ಸಿಎಂ ಸಿದ್ದರಾಮಯ್ಯರ ಬಜೆಟ್ ಭಾಷಣ ಅವರ ಅಸಹಾಯಕತೆಗೆ ಹಿಡಿದ ಕನ್ನಡಿ: ಮಾಜಿ ಸಚಿವ ಕೆ.ಸುಧಾಕರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಭಾಷಣವು ಅವರ ಅಸಹಾಯಕತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಮುಂಬರುವ ವರ್ಷಗಳಲ್ಲಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಹೇಳಿದರು.
ಡಾ. ಕೆ ಸುಧಾಕರ್
ಡಾ. ಕೆ ಸುಧಾಕರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಭಾಷಣವು ಅವರ ಅಸಹಾಯಕತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಮುಂಬರುವ ವರ್ಷಗಳಲ್ಲಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಹೇಳಿದರು.

ಶುಕ್ರವಾರ ಹಣಕಾಸು ಖಾತೆಯನ್ನು ಹೊಂದಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದರು.

ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, 'ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಣಕಾಸು ಹಂಚಿಕೆ ಬಗ್ಗೆ ಸ್ಪಷ್ಟತೆ ಇಲ್ಲದ ಪೊಳ್ಳು ಹೇಳಿಕೆಗಳಿಂದ ಕೂಡಿದೆ. ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ (ಈಗಿನ ಅವಧಿಯಲ್ಲಿ) ಮುಂಬರುವ ವರ್ಷಗಳಲ್ಲಿ ರಾಜ್ಯವನ್ನು ಹಣಕಾಸಿನ ಬಿಕ್ಕಟ್ಟಿನತ್ತ ತಳ್ಳಲು ಕೇವಲ ಅಡಿಪಾಯವನ್ನಷ್ಟೇ ಹಾಕಿದೆ' ಎಂದು ದೂರಿದರು.

ವಿಧಾನಸಭೆಯಲ್ಲಿನ ಬಜೆಟ್ ಮೇಲಿನ ಮುಖ್ಯಮಂತ್ರಿಯವರ ಭಾಷಣವು ಬಜೆಟ್ ಭಾಷಣಕ್ಕಿಂತ ರಾಜಕೀಯದಂತೆಯೇ ಇದೆ ಎಂದು ಅವರು ಹೇಳಿದರು.

'ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಭಾಷಣವು ಕರ್ನಾಟಕದ ದೃಷ್ಟಿಕೋನದ ಹೇಳಿಕೆಗಿಂತ ಹೆಚ್ಚಾಗಿ ರಾಜಕೀಯ ಭಾಷಣದಂತೆ ಧ್ವನಿಸುತ್ತದೆ. ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡುವಾಗ ಅವರು ಹೆಚ್ಚು ಜವಾಬ್ದಾರಿಯುತ ಆಗಿರಬೇಕಿತ್ತು. ಪ್ರಧಾನಿ ಮೋದಿಯವರ ನಾಯಕತ್ವವೇ ದೇಶವನ್ನು ಸಾಂಕ್ರಾಮಿಕ ರೋಗದಿಂದ ಪಾರು ಮಾಡಿದೆ' ಎಂದು ಹೇಳಿದರು.

'ಎರಡು ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ತಿಂಗಳಿಗೆ 10 ಕೆಜಿ ಆಹಾರಧಾನ್ಯಗಳನ್ನು ನೀಡಿತು. ಸಿಎಂ ಸಿದ್ದರಾಮಯ್ಯ ತಮ್ಮ ರಾಜನೀತಿಯನ್ನು ಪ್ರದರ್ಶಿಸುವ ಬದಲು ಹತಾಶ ಮತ್ತು ಅಸಹಾಯಕ ರಾಜಕಾರಣಿಯಂತೆ ವರ್ತಿಸಿದರು' ಎಂದು ಅವರು ಹೇಳಿದರು.

ಬಜೆಟ್ ವಿಶೇಷವಾಗಿ ಬಯಲುಸೀಮೆ ಭಾಗದ ಜನರಿಗೆ ನಿರಾಶಾದಾಯಕವಾಗಿದೆ. ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಬಜೆಟ್ ನಿರಾಶಾದಾಯಕವಾಗಿದೆ. ನಮ್ಮ ಸರ್ಕಾರವು ಹೈಟೆಕ್ ಅಂತರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣವನ್ನು ಘೋಷಿಸಿತ್ತು ಮತ್ತು ಹಿಂದಿನ ಬಜೆಟ್‌ನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಆದರೆ, ಇಂದಿನ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ' ಎಂದರು.

ಇತ್ತೀಚೆಗೆ ದಕ್ಷಿಣದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು 2022-23 ರಲ್ಲಿ 2,65,720 ಕೋಟಿ ರೂಪಾಯಿಗಳಷ್ಟಿದ್ದ ಬಜೆಟ್ ಗಾತ್ರವನ್ನು 2023-24 ರಲ್ಲಿ 3,27,747 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಇದು ಶೇ 23 ರಷ್ಟು ಬೆಳವಣಿಗೆ ದರದೊಂದಿಗೆ 62,027 ಕೋಟಿ ರೂಪಾಯಿಗಳ ಹೆಚ್ಚಳವಾಗಿದೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಏಳನೇ ಬಜೆಟ್ ಇದಾಗಿದೆ. ಅವರು ತಮ್ಮ ಹಿಂದಿನ ಅವಧಿಯಲ್ಲಿ 2013 ರಿಂದ 2018 ರವರೆಗೆ 6 ಬಜೆಟ್‌ಗಳನ್ನು ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com